
ಪ್ರತಿಯೊಬ್ಬರಲ್ಲೂ ಒಬ್ಬ ಆಂಜನೇಯನಂತಹ ಶಕ್ತಿ ಇರುತ್ತದೆ.ಅದನ್ನು ಹೊರತೆಗೆಯಲು ಅವರನ್ನು ಪ್ರೇರೇಪಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ನಾನಿಲ್ಲಿ ಪರಿಶೀಲಿಸಲು ಬಂದಿಲ್ಲ ಬದಲಿಗೆ ಪ್ರೇರೇಪಿಸಲು ಬಂದಿದ್ದೇನೆ. ಬದಲಾಗುತ್ತಿರುವ ಜನರ ಮನೋಭಾವಗಳಿಂದ ಬದಲಾಗುತ್ತಿರುವ ಆಹಾರ ಪದ್ದತಿ,ಜೀವನ ಶೈಲಿಗಳಿಂದ ಮುಂದೆ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು.ಇದರಿಂದ ವಿವಿಧ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಬಹುದು.ರೋಗ ನಿರೋಧಕತೆ ಹೆಚ್ಚಿಸಿಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಲು ನೀವೆಲ್ಲ ಹೆಚ್ಚಿನ ಆಸಕ್ತಿ ಬದ್ದತೆಗಳಿಂದ ಕಾರ್ಯನಿರ್ವಹಿಸಬೇಕಿದೆ. ಸಮಾಜದ ಆರೋಗ್ಯ ರಕ್ಷಣೆಯ ಮಹತ್ವದ ಜವಬ್ದಾರಿ ನಿಮ್ಮ ಮೇಲಿದೆ ಎಂದು ಆರೋಗ್ಯ ಇಲಾಖಾ ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ನುಡಿದರು.ಅವರು ತೀರ್ಥಹಳ್ಳಿ ಪ್ರಾ.ಆ.ಕೇಂದ್ರ ಕೋಣಂದೂರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಕನ್ನಂಗಿಗೆ ಭೇಟಿ ನೀಡಿದ್ದ ವೇಳೆ ನಡೆಸಿದ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದರು.

ಮುಂದುವರೆದು, ಪ್ರಪಂಚದ ಅತೀ ಪರಿಣಾಮಕಾರಿ ಔಷಧಿ ಎಂದರೆ ನಗು ಪ್ರೀತಿ ಮತ್ತು ಕಾಳಜಿ.ರೋಗಿಗಳ ಚಿಕಿತ್ಸೆಯಲ್ಲಿ ಸದಾ ಈ ಔಷಧಿಗಳು ಜೊತೆಗಿರಬೇಕು. ಹಸಿವು ಮತ್ತು ಬಡತನ ಒಂದು ವಿಶ್ವ ವಿದ್ಯಾಲಯಕ್ಕಿಂತ ಹೆಚ್ಚಿನ ಪಾಠ ಕಲಿಸುತ್ತವೆ. ನನಗೆ ಬಡತನದ ಕಷ್ಟಗಳು ಗೊತ್ತಿದೆ.ಅದು ನನಗೆ ಬಡವರು ಅಸಹಾಯಕರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಕಲಿಸಿದೆ.ರೋಗಿಗಳನ್ನು ಅದರಲ್ಲೂ ತೀರಾ ಬಡ,ಅಸಹಾಯಕ ವರ್ಗಗಳನ್ನು ಅತ್ಯಂತ ಗೌರವದಿಂದ ಕಾಣಬೇಕು. ನೀವು ತೋರುವ ಕಾಳಜಿ,ಸ್ಪಂದನೆಗಳು ನಿಮ್ಮ ಬದುಕಿಗೆ ಸಾರ್ಥಕತೆ ನೀಡುತ್ತದೆ. ಸರ್ಕಾರ ಪ್ರತೀ ವರ್ಷ ಮೂವತ್ತೆಂಟು ಸಾವಿರ ಕೋಟಿಯಷ್ಟು ಹಣವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕಾಗಿ ಖರ್ಚು ಮಾಡುತ್ತದೆ.ಅದರ ಪ್ರಯೋಜನವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ನೀವು ಮಾಡಬೇಕಿದೆ ಎಂದರು.
ಆಸ್ಪತ್ರೆಯಲ್ಲಿದ್ದ ರೋಗಿಗಳ ಜೊತೆ ಮಾತನಾಡಿ ಮಾಹಿತಿ ಪಡೆದ ಅವರು ಅಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕ ರೋಗ ಚಿಕಿತ್ಸೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ವೈದ್ಯಾಧಿಕಾರಿಗಳು ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿದರು.ಅಪರಾಹ್ನ ತೀರ್ಥಹಳ್ಳಿಯ ಗೋಪಾಲಗೌಡ ರಂಗ ಮಂದಿರದಲ್ಲಿ ತಾಲ್ಲೂಕಿನ ಎಲ್ಲಾ ಸಂಸ್ಥೆಗಳ ವೈದ್ಯಾಧಿಕಾರಿಗಳು ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಅಸಾಂಕ್ರಾಮಿಕ ಘಟಕದ ಸಿಬ್ಬಂದಿಗಳ ಸಭೆ ನಡೆಸಿ, ಕಂಡು ಬಂದ ಉತ್ತಮ ಅಂಶಗಳಿಗೆ ಪ್ರಶಂಸೆ ವ್ಯಕ್ತಪಡಿಸಿ, ಉತ್ತಮ ಪಡಿಸಬೇಕಿರುವ ಅಂಶಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ ತಮ್ಮ ಪ್ರೇರಣಾತ್ಮಕ ಮಾತುಗಳಿಂದ ಗುಣಮಟ್ಟದ ಆರೋಗ್ಯ ಸೇವೆ ನೀಡುವತ್ತ ವೈದ್ಯಾಧಿಕಾರಿ ಸಿಬ್ಬಂದಿಗಳಿಗೆ ಸ್ಪೂರ್ತಿ ತುಂಬಿದ ಜಂಟಿ ನಿರ್ದೇಶಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ ಜಂಟಿ ನಿರ್ದೇಶಕರ ಜೀವನಾನುಭಗಳ ಮಾತುಗಳು ಅತ್ಯಂತ ಸ್ಪೂರ್ತಿದಾಯಕವಾಗಿದ್ದು ಆರೋಗ್ಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಎಲ್ಲರಲ್ಲೂ ಉತ್ಸಾಹ ತುಂಬಿವೆ. ಸೇವೆಯ ಮಹತ್ವ ಮತ್ತು ಅರಿವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ವೈದ್ಯಾಧಿಕಾರಿ ಸಿಬ್ಬಂದಿಗಳಿಗೆ ಇಂತಹ ಪ್ರೇರಣೆಗಳ ಅಗತ್ಯವಿದೆ. ಎಲ್ಲಾ ತಾಲ್ಲೂಕು,ಜಿಲ್ಲಾ ಮಟ್ಟಗಳಲ್ಲಿ ಇಲಾಖೆಯಿಂದ ಈ ಬಗ್ಗೆ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವಂತೆ ಮನವಿ ಮಾಡಿದರು. ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಎ ಎಂ ಜಗದೀಶ್ ಸ್ವಾಗತಿಸಿ, ನಿರೂಪಿಸಿದರು,ವೇದಾಶ್ರೀ ಪ್ರಾರ್ಥಿಸಿ, ಈಶ್ವರ್ ವಂದಿಸಿದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…