
ಜೀವನದಲ್ಲಿ ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಮಾಡಿದ ತಪ್ಪಿಗಾಗಿ ಕೊರಗುತ್ತಾ ಕುಳಿತುಕೊಳ್ಳದೇ ತಪ್ಪನ್ನು ತಿದ್ದಿಕೊಂಡು ಒಳ್ಳೆಯ ಮನುಷ್ಯನಾಗಲು ಪ್ರಯತ್ನಿಸುವುದು ಅತೀ ಮುಖ್ಯವಾಗಿದೆ. ತಪ್ಪನ್ನು ಸರಿಪಡಿಸಿಕೊಂಡು ಉತ್ತಮವಾಗಿ ಬದುಕಲು ಎಲ್ಲರಿಗೂ ಅವಕಾಶವಿರುತ್ತದೆ. ಯಾವ ತಪ್ಪಿತಸ್ಥನೂ ಖಾಯಂ ತಪ್ಪಿತಸ್ಥನಾಗಿರಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ. ಎಸ್. ತಿಳಿಸಿದರು.

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಶಾಹಿ ಎಕ್ಸ್ಪೋರ್ಟ್ಸ್ ಪ್ರೆöವೇಟ್ ಲಿಮಿಟೆಡ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಕಾರಾಗೃಹದ ಬಂಧಿನಿವಾಸಿಗಳಿಗಾಗಿ ಕಾರಾಗೃಹದ ಅಗರಬತ್ತಿ ವಿಭಾಗದಲ್ಲಿ ಆರಂಭಗೊಳ್ಳುವ ಹೊಲಿಗೆ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸುಧಾರಣೆಗೊಂಡು ಪ್ರಗತಿ ಹೊಂದಲು ಎಲ್ಲರಿಗೂ ಅವಕಾಶಗಳು ಒದಗುತ್ತವೆ. ಕಾರಾಗೃಹಕ್ಕೆ ಬಂದವರು ತಪ್ಪಿತಸ್ಥ ಭಾವನೆಯಿಂದ ಕುಗ್ಗುವುದಕ್ಕಿಂತ ಶಿಕ್ಷಣ, ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಮುಂದೆ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ದಾರಿ ಸಿಕ್ಕಂತಾಗುತ್ತದೆ. ಬಂಧಿಗಳು ತಮ್ಮ ಬಿಡುಗಡೆಯ ಬಳಿಕ ಉತ್ತಮ ವ್ಯಕ್ತಿಗಳಾಗಿ ಇತರರ ಬದುಕಿಗೆ ಹಾಗೂ ಸಮಾಜಕ್ಕೆ ಪ್ರೇರಣೆಯಾಗಲು ಸಾಧ್ಯವಿದೆ ಎಂದರು.
ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯವರು ಬಂಧಿಗಳಿಗೆ ಉತ್ಕೃಷ್ಟ ಗುಣಮಟ್ಟ ಹಾಗೂ ಸುಧಾರಿತ ತಂತ್ರಜ್ಞಾನವನ್ನೊಳಗೊಂಡ ಟೈಲರಿಂಗ್ ತರಬೇತಿಯನ್ನು ಒದಗಿಸುವ ಮೂಲಕ ಇವರ ಬದುಕಿಗೊಂದು ಹೊಸ ಭರವಸೆಯನ್ನು ತುಂಬಿದ್ದಾರೆ. ಈ ನಂಬಿಕೆಯನ್ನು ಉಳಿಸಿಕೊಂಡು ಕೌಶಲ್ಯ ಪರಿಣಿತಿಯನ್ನು ಹೊಂದುವುದರ ಮುಖೇನ ತಮ್ಮ ಬದುಕಿನಲ್ಲಿ ಬದಲಾವಣೆಯನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಬಂಧಿನಿವಾಸಿಗಳಿಗೆ ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ಎಜಿಎಂ ಲಕ್ಷರಮಣ ಧರ್ಮಟ್ಟಿ ಮಾತನಾಡಿ, ಬಂಧಿನಿವಾಸಿಗಳಿಗೆ ಟೈಲರಿಂಗ್ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. ಚೆನ್ನಾಗಿ ತರಬೇತಿ ಹೊಂದಿದವರಿಗೆ ಬಿಡುಗಡೆ ಹೊಂದಿದ ಬಳಿಕ ಶಾಹಿ ಸಂಸ್ಥೆಯಲ್ಲಿಯೇ ಉದ್ಯೋಗಾವಕಾಶವನ್ನು ಸಹ ಕಲ್ಪಿಸಲಾಗುತ್ತದೆ ಎಂದರು.
ಶಿವಮೊಗ್ಗ ರೋಟರಿ ಕ್ಲಬ್ನ ನಿಯೋಜಿತ ಜಿಲ್ಲಾ ಗವರ್ನರ್ ವಸಂತಕುಮಾರ್ ಹೋಬಳಿದಾರ್ ಮಾತನಾಡಿ, ವಿದ್ಯೆಯೊಂದಿಗೆ ಕೌಶಲ್ಯವೂ ಅತೀ ಮುಖ್ಯ. ಕೆಲಸಕ್ಕೆ ತಕ್ಕ ಕೌಶಲ್ಯವನ್ನು ಹೊಂದಿದ್ದಾಗ ಮಾತ್ರ ಕೆಲಸ ಸುಲಭವಾಗಿ ಸಿಗುತ್ತದೆ. ಉತ್ತಮ ಕೌಶಲ್ಯ ಹೊಂದಿರುವವರು ಒಳ್ಳೆಯ ಕೆಲಸಗಾರರೂ, ಉದ್ಯಮಿಗಳೂ ಆಗಲು ಸಾಧ್ಯ ಎಂದರು.
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆ ವತಿಯಿಂದ ಕಾರಾಗೃಹದ 300 ಬಂಧಿಗಳಿಗೆ ಟೈಲರಿಂಗ್ ತರಬೇತಿ ನೀಡಲು ಯೋಜಿಸಲಾಗಿದೆ. ಪ್ರಾರಂಭಿಕವಾಗಿ 60 ಬಂಧಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾಧಿಕಾರಿಯವರ ಕಚೇರಿಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಜಯಸ್ವಾಮಿ ಎಂ. ಎಂ., ಶಿವಮೊಗ್ಗ ಪರೋಪಕಾರಂ ಸಂಸ್ಥೆ ಸಂಚಾಲಕ ಶ್ರೀಧರ ಎನ್. ಎಂ., ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಕು. ಪ್ರೀತಿ ಆರ್. ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಕು. ದಿವ್ಯ, ಕೇಂದ್ರ ಕಾರಾಗೃಹದ ಜೈಲರ್ ರಾದ ಶ್ರೀಶೈಲ ಎಸ್. ಕಟ್ಟಿಮನಿ, ಸುಷ್ಮಾ ಬಿ. ವಡಗೇರ, ಶರಣಬಸವ, ವಿಜಯಕುಮಾರ್, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಲೀಲಾ ಎಸ್. ಎನ್. ಹಾಗೂ ಶಾಹಿ ಎಕ್ಸ್ಪೋರ್ಟ್ಸ್ ಸಂಸ್ಥೆಯ ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಚಂದ್ರ ಹೆಮ್ಮಾಡಿ ಪ್ರಾರ್ಥಿಸಿದರು. ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

