
ಶಿವಮೊಗ್ಗ : ನಿದಿಗೆ ಹಾಗು ಮಾಚೇನಹಳ್ಳಿ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಇಂದು ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆ ವಿರುದ್ಧ ಮಾಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೆ ಕಾರಣ ಏನು?
ಕಳೆದ 10 ವರ್ಷಗಳಿಂದ ಶಾಹಿ ಎಕ್ಸ್ ಪೋರ್ಟ್ ಚಿಮಣಿಯಿಂದ ಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ಧೂಳು ಹಾಗು ಬಟ್ಟೆಗಳಿಗೆ ಅಳವಡಿಸುವ ಕಲರ್ ಡೈನಿಂದ ಪರಿಸರ ಮಾಲಿನ್ಯ ಆಗುತ್ತಿದೆ ಮತ್ತು ರಾಸಾಯನಿಕ ಮಿಶ್ರಿತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ ಎಂದು ಕಾರ್ಖಾನೆ ವಿರುದ್ದ ದೂರನ್ನು ಕಾರ್ಖಾನೆ ಮಾಲೀಕರಿಗೆ, ವಾಯು ಮಾಲಿನ್ಯ ಇಲಾಖೆಗೆ, ಕೆ.ಐ.ಎ.ಡಿ.ಬಿ ಇಲಾಖೆಗೆ ಪರಿಸರವಾದಿಗಳು, ಗ್ರಾಮದ ರೈತರು ಸಾಕಷ್ಟು ದೂರನ್ನು ನೀಡುತ್ತಾ ಬಂದಿದ್ದಾರೆ.
ದೂರನ್ನು ಪರಿಶೀಲನೆ ಮಾಡಿದ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಶಾಹಿ ಗಾರ್ಮೆಂಟ್ಸ್ ಮುಚ್ಚಲು ಅರ್ಹತೆಯುಳ್ಳ ಘಟಕ ಎಂದು ವರದಿ ನೀಡಿದೆ ಎಂದು ಪರಿಸರ ಸಂರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಮೇಲೆ ಪ್ರತಿಭಟನಾಕಾರರ ಆರೋಪ ಏನು ?
ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯಿಂದ ಬರುವ ಕಲುಷಿತ ನೀರು ಭದ್ರಾ ಎಡನಾಲ ಕಾಲುವೆಗೆ ಸೇರುತ್ತಿದೆ ಇದರಿಂದ ಕಾಲುವೆ ನೀರನ್ನು ಬಳಸುತ್ತಿರುವ ನಿಧಿಗೆ, ಮಲವಗೊಪ್ಪ, ದುಮ್ಮಳ್ಲಿ, ರೆಡ್ಡಿ ಕ್ಯಾಂಪ್, ಹೊಸೂರು, ಸೋಗಾನೆ, ಹಾರೋಘಟ್ಟ, ರಾಂಪುರ, ಕಾಚಿನ ಕಟ್ಟೆ, ಸಂತೆ ಕಡೂರು, ಒಡ್ಡಿನ ಕೊಪ್ಪ, ಹರಿಗೆ, ಪುರಲೆ, ಗುರುಪುರ, ಓತಿಕಟ್ಟೆ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ.
ಕಾರ್ಖಾನೆ ಕಲುಷಿತ ನೀರು ಕೆರೆ ಕಾಲುವೆ ಸೇರುತ್ತಿರುವುದರಿಂದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳು 10.000 ಕ್ಕೂ ಹೆಚ್ಚು ಕುಟುಂಬಗಳು ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ.
ವಾಯು ಮಾಲಿನ್ಯ ಹಾಗು ಜಲ ಮಾಲಿನ್ಯದಿಂದ ಜ್ವರ,ಕೆಮ್ಮು,ದಮ್ಮು,ಚರ್ಮದ ಕಾಯಿಲೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ.
ಕಾರ್ಖಾನೆಯಿಂದ ಹೊರ ಬರುತ್ತಿರುವ ಧೂಳು ಹಾಗು ಕೆಟ್ಟ ವಾಸನೆಯಿಂದ ಸುತ್ತಮುತ್ತಲಿನ ಕೈಗಾರಿಕೆಗಳ ಕಾರ್ಮಿಕರು ಕೆಲಸಕ್ಕೆ ಬರಲು ಆಗುತ್ತಿಲ್ಲ ಇದರಿಂದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ.

ಬುಳ್ಳಾಪುರ ಬಸವರಾಜಪ್ಪ.

ಕಳೆದ ಹತ್ತು ವರ್ಷದಿಂದ ನಾವು ಈ ಭಾಗದ ಜನ ಜಾನುವಾರುಗಳು ಈ ಕಾರ್ಖಾನೆಯಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ. ಆಗ ಬಿ.ಎಸ್,ಯಡಿಯೂರಪ್ಪರವರು ಈ ಭಾಗದ ಜನಗಳಿಗೆ ಒಳ್ಳೆಯದಾಗಲಿ ಕೆಲಸ ಸಿಗಲಿ ಶಿವಮೊಗ್ಗ ಅಭಿವೃದ್ಧಿಯಾಗಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎಂದು ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆ ಇಲ್ಲಿಗೆ ಬರುವಂತೆ ಮಾಡಿದ್ದರು, ಆದರೆ ಇಂದು ಈ ಕಾರ್ಖಾನೆ ಲಕ್ಷಾಂತರ ಜನರಿಗೆ ಮರಣ ಶಾಸನ ಬರೆಯುತ್ತಿದೆ, ಕಾರ್ಖಾನೆಯ ಕಲುಷಿತ ನೀರಿನಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ.
ಕಾರ್ಖಾನೆಯಿಂದ ಹೊರ ಬರುತ್ತಿರುವ ಹಾರು ಬೂದಿ ಸಣ್ಣ ಕೈಗಾರಿಕೆಗಳ ಮೇಲೆ ಬಂದು ಕೂರುತ್ತಿದೆ ಕೆಟ್ಟ ವಾಸನೆ ಸಹ ಬರುತ್ತಿದೆ ಇದರಿಂದ ಸಣ್ಣ ಕೈಗಾರಿಕೆಗಳು ಬಾಗಿಲು ಹಾಕುವ ಪರಿಸ್ಥಿತಿಯಲ್ಲಿದೆ, ನಾಲೆ ಕೆರೆ ಸೇರುತ್ತಿರುವ ಕಾರ್ಖಾನೆಯ ವಿಷದ ನೀರಿನಿಂದ ಜಲಚರ ಪ್ರಾಣಿಗಳು ಸಾಯುತ್ತಿವೆ. ನಾವು ಕಾರ್ಖಾನೆ ಇದ್ದಾಗಲೂ ಬದುಕಿದ್ದೇವೆ ಇಲ್ಲದಾಗಲೂ ಬದುಕಿದ್ದೇವೆ ಕಾರ್ಖಾನೆ ಬೇಕೇ ಬೇಕೆಂಬುದು ನಮ್ಮ ವಾದ ಅಲ್ಲ, ಕಾರ್ಖಾನೆ ಆರಂಭದಲ್ಲಿ ನಮ್ಮವರಿಗೆ ಕೆಲಸ ಕೊಟ್ಟಿದ್ದರು ಆದರೆ ಈಗ ಹೊರ ರಾಜ್ಯದ ಜನರನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ,
ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಿಂದ ಪರಿಸರ ಹಾಗು ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಸಿಗಬೇಕಾದರೆ ಕಾರ್ಖಾನೆಗೆ ಹೋಗುವ ದಾರಿ ಬಂದ್ ಮಾಡಬೇಕು, ವಿದ್ಯುತ್ ಸಂಪರ್ಕ ಖಡಿತಗೊಳಿಸಬೇಕು, ನೀರು ಸಿಗದ ಹಾಗೆ ಮಾಡಬೇಕು ಆಗ ಕಾರ್ಖಾನೆಯವರು ದಾರಿಗೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್.

ಈ ಹಿಂದೆ ಹತ್ತಾರು ಸಭೆಗಳನ್ನು ನಡೆಸಿ ಶಾಹಿ ಗಾರ್ಮೆಂಟ್ಸ್ ನಿಂದ ಹೊರ ಬರುವ ಕಲುಷಿತ ನೀರು ಕಾಲುವೆಗೆ ಸೇರುತ್ತಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೆವು, ಕಾರ್ಖಾನೆಯಿಂದ ಹೊರಬರುವ ಧೂಳು ಉಸಿರಾಟದ ಮೂಲಕ ನೇರ ಶ್ವಾಸಕೋಶ ಸೇರಿ ಅಸ್ತಮಾದಂತಹ ಕಾಯಿಲೆಗಳು ಕಾರ್ಮಿಕರಲ್ಲಿ ಕಂಡು ಬರುತ್ತಿದೆ. ಕಲುಷಿತ ನೀರು ಕಾಲುವೆ ಸೇರುವುದನ್ನು ತಡೆಗಟ್ಟಲು ವಿಫಲರಾದರು, ಇಲ್ಲಿನ ನಾಲ್ಕು ಜನರಿಗೆ ಕೆಲಸ ಕೊಟ್ಟು ಲಕ್ಷಾಂತರ ಜನರ ಪ್ರಾಣ ತೆಗೆಯುತ್ತಿದ್ದಾರೆ, ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕೊಟ್ಟಿರುವ ಕಾರ್ಖಾನೆ ಮುಚ್ಚಬೇಕೆಂಬ ಆದೇಶವನ್ನು ಜಾರಿಗೆ ತರಬೇಕು, ಕಾರ್ಖಾನೆಯವರು ಈಗಿರುವ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಿಕೊಂಡ ನಂತರ ತೆರೆಯಲು ಅನುಮತಿ ಕೊಡಬೇಕು, ಹೋರಾಟ ಇಲ್ಲದೆ ಫಲಿತಾಂಶ ಬರುವುದಿಲ್ಲ ಇಂದು ಆರಂಭವಾದ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡಲು ನಾವಿಲ್ಲಿಗೆ ಬಂದಿದ್ದೇವೆ ನಿಮ್ಮ ಹೋರಾಟ ಮುಂದುವರೆಯಬೇಕು ನಿಮ್ಮ ಹೋರಾಟದ ಬೆಂಬಲಕ್ಕೆ ನಾವಿದ್ದೇವೆ.
ಶಾಸಕಿ ಶಾರದಾ ಪೂರ್ಯನಾಯ್ಕ್

ನಾವು ಚುನಾವಣಾ ಪ್ರಚಾರದ ವೇಳೆ ಗ್ರಾಮಗಳಿಗೆ ತೆರಳಿದ್ದಾಗ ಅಲ್ಲಿನ ಮಹಿಳೆಯರು ನಾವು ಬೆಳೆಯನ್ನ ನಂಬಿ ಬದುಕುತ್ತಿದ್ದೇವೆ ನಮ್ಮ ಜೀವನೋಪಾಯಕ್ಕೆ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಬರುವಂತೆ ಮಾಡಿ ಎಂದು ಮನವಿ ಮಾಡುತ್ತಿದ್ದರು, ಇಂತಹ ಕಾರ್ಖಾನೆಗಳು ಮಾಡುವ ಈ ರೀತಿಯ ಕೆಲಸಗಳಿಂದ ಜನರು ಕಾರ್ಖಾನೆಗಳ ಮೇಲೆ ಇಡಲಾದ ನಂಬಿಕೆಗೆ ಕಪ್ಪು ಚುಕ್ಕೆಯಂತಾಗಿದೆ, ಪ್ರತಿಭಟನೆಯಲ್ಲಿ ಶಾಹಿ ಗಾರ್ಮೆಂಟ್ಸ್ ನಿಂದಾಗುತ್ತಿರುವ ಹಾನಿ ಬಗ್ಗೆ ರೈತರು ಪರಿಸರವಾದಿಗಳು ಸಣ್ಣ ಕೈಗಾರಿಕೆಗಳ ಮಾಲೀಕರು ಮಾಹಿತಿ ನೀಡಿದ್ದಾರೆ. ತಕ್ಷಣ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯವರು ತಪ್ಪನ್ನು ತಿದ್ದಿಕೊಳ್ಳಲಿ ಇಲ್ಲವಾದಲ್ಲಿ ಅವರಿಗೆ ಇಲ್ಲಿರುವ ಅವಕಾಶ ನಾವು ಕೊಡುವುದಿಲ್ಲ, ಕಾರ್ಖಾನೆಯವರು ಹೊರಬಂದು ಜಿಲ್ಲಾಧಿಕಾರಿಗಳ ಮುಂದೆ ಆಗಿರುವ ಘಟನೆಗಳ ಬಗ್ಗೆ ಚರ್ಚಿಸಿದರೆ ಒಳಿತು ಈ ಸಮಸ್ಯೆ ಅಂತ್ಯವಾಗುವವರೆಗೆ ನಾವು ಹೋರಾಟಗಾರರ ಬೆಂಬಲಕ್ಕೆ ಇರುತ್ತೇವೆ ಎಂದರು.

ನಂತರ ಪ್ರತಿಭಟನಾ ನಿರತರು ಸರ್ಕಾರದ ಗಮನ ಸೆಳೆಯಲು ಶಾಸಕಿ ಶಾರದಾ ಪೂರ್ಯನಾಯ್ಕ್ ರವರ ಮೂಲಕ ಶಾಹಿ ಗಾರ್ಮೆಂಟ್ಸ್ ನಿಂದಾಗುತ್ತಿರುವ ಹಾನಿ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ನೀಡಿದರು.