
ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ, ಸಾಹಿತಿ ಟಿ ಜಿ ಹರೀಶರ ಅಂಕಣ ಬರಹಗಳ ಸಂಕಲನ “ಅಂಗಳದಲ್ಲಾಡುವ ನವಿಲು” ತೀರ್ಥಹಳ್ಳಿಯಲ್ಲಿ ಸಹಪಾಟಿಗಳ ಬಳಗದಿಂದ ನಡೆದ ವಿಶಿಷ್ಟ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ಮೈಸೂರಿನ ಉದ್ಯಮಿ ಗೋಪಾಲಕೃಷ್ಣ ನಾಯಕ್ ಮಾತನಾಡಿ, ಕನ್ನಡದ ಒಬ್ಬ ಉತ್ತಮ ಬರಹಗಾರನಾಗಿ ರೂಪುಗೊಂಡಿರುವ ನಮ್ಮ ಗೆಳೆಯನ ಸಾಧನೆ ನಮ್ಮೆಲ್ಲಾ ಸಹಪಾಟಿಗಳಿಗೂ ಹೆಮ್ಮೆಯ ವಿಷಯ. ಆ ಸಂತಸ ನಮ್ಮೆಲ್ಲರನ್ನೂ ಇಂದು ಒಂದುಗೂಡಿಸಿದೆ ಎಂದರಲ್ಲದೆ ಹರೀಶರಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಗುರುಗಳೂ,ತುಂಗಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಿ ಎಸ್ ಸೋಮಶೇಖರ್ ಪುಸ್ತಕದ ಬಗ್ಗೆ ಮಾತನಾಡುತ್ತಾ, ಹರೀಶನ ಬರಹಗಳನ್ನು ಓದುತ್ತಿದ್ದರೆ ನನಗೆ ಆಗಾಗ ತೇಜಸ್ವಿಯವರ ಮಾದರಿಯ ಬರಹದ ಮುಂದುವರಿಕೆಯಾಗಿ ಕಾಣುತ್ತದೆ. ಹರೀಶನ ಅಂಗಳದಲ್ಲಾಡುವ ನವಿಲು ಅಂಕಣ ಬರಹದ ಒಳಗೆ ಬಹುತೇಕ ಪ್ರಬಂಧಗಳು ಪುಟದ ಮಿತಿಯಲ್ಲಿದ್ದರೂ ಹೇಳಬೇಕಾದ ಮಾತುಗಳನ್ನು ಓದುಗನಿಗೆ ತಲುಪಿಸುವಲ್ಲಿ ಸಫಲವಾಗಿವೆ. ಟಿಪ್ ಆಫ್ ದ ಐಸ್ ಬರ್ಗ್ ಎಂಬ ಮಾತಿನಂತೆ ಈ ಸಂಕಲನದಲ್ಲಿ ನಮಗೆ ಕಾಣುತ್ತಿರುವ ಅಂಶಕ್ಕಿಂತ ಮಿಗಿಲಾದುದು ಆಳದಲ್ಲಿದೆ, ನಾವದನ್ನು ಕಾಣುವ ಪ್ರಯತ್ನ ಮಾಡಬೇಕು. ಬಹುತೇಕ ಪ್ರಬಂಧಗಳು ಬಾಲ್ಯದ ಜೀವನದ ಸಾರ್ಥಕ ತೆಯನ್ನು ತಿಳಿಸುತ್ತವೆ. ಬಾಲ್ಯದ ಹಣ್ಣ ಹಾದಿ, ನೆನಪಿನ ನವಿಲು ಗರಿ, ಅಂಗಳದಲ್ಲಾಡುವ ನವಿಲುಗಳು ಮುಗ್ಧತೆಯನ್ನು ಪ್ರತಿಫಲಿಸುತ್ತವೆ. ಗುರು ಶಿಷ್ಯ ಸಂಬಂಧ, ಜನ್ಮಾಂತರ ವಾಸನೆ ಮುಂತಾದವು ನಮ್ಮನ್ನು ಪುರಾಣದತ್ತ ಕೊಂಡೊಯ್ಯುತ್ತವೆ. ಹಳ್ಳೀ ಕೆಲಸದ ಚೆಲುವು, ಪ್ರಾಣಿ ಪ್ರೀತಿ. ಭಾಷಾ ಸೊಗಡು. ಆಡುನುಡಿಗಳ ಚೆಲುವು ಮುಂತಾದವು ನಮಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಡುತ್ತದೆ.ಹರೀಶನ ಬಾಲ್ಯದ ಬಡತನ, ಕಷ್ಟ, ಈತನಿಗಾದ ಜಾತಿಯ ತಾರತಮ್ಯಗಳ ನೋವಿನ ದಿನಗಳನ್ನು ತಿಳಿಯುವ ಪ್ರಯತ್ನ ಮಾಡಿದರೆ ಇಂತಹ ಬರಹಗಳಿಗೆ ಪ್ರಾಮುಖ್ಯತೆ ಬರುತ್ತದೆ.ಈತನ ಬರಹಗಳನ್ನು ಯಾವುದೇ ಎಡ ಬಲ ಸಿದ್ದಾಂತಗಳ ತಕ್ಕಡಿಯಿಂದ ತೂಗುವುದು ಸರಿಯಲ್ಲ. ಇದೊಂದು ಶುದ್ಧ ಮಾನವ ಪ್ರೀತಿಯನ್ನು ಒಳಗೊಂಡಿರುವ ಮಾದರಿಯ ಬರಹ ಇಂತಹ ನನ್ನ ಕಿರಿಯ ಗೆಳೆಯನಿಗೆ ಶುಭಾಶಯಗಳನ್ನು ಕೋರುತ್ತೇನೆ ಎಂದರು.
ಕೃತಿಕಾರ ಟಿ ಜಿ ಹರೀಶ ಮಾತನಾಡಿ,ಬಾಲ್ಯದ ಅಂದಿನ ಪರಿಸರ,ಕಷ್ಟ, ಸಮಾಜಿಕವಾಗಿ ಎದುರಿಸಿದ ಅವಮಾನಗಳು ಬರಹದ ಮೂಲಕ ಬೇರೆಯದೇ ರೂಪದಲ್ಲಿ ಹೊರಹೊಮ್ಮಿ ನನ್ನನ್ನು ಹಗುರಾಗಿಸಿದೆ.ಅದು ಸಾಕಷ್ಟು ಜನ ಮೆಚ್ಚುಗೆ ಪಡೆದಿರುವುದು ಖುಷಿ ತಂದಿದೆ. ಅಂದಿನ ಗೆಳೆಯರ ಪ್ರೀತಿ ಉದಾರತೆ ಇಂದಿಗೂ ಮುಂದುವರೆದ ಬಗೆ ನೋಡಿ ಮನ ತುಂಬಿದೆ. ಇಂತಹ ಪ್ರೀತಿ ತೋರಿದ ಎಲ್ಲಾ ಸಹಪಾಟಿಗಳಿಗೂ ಹಾಗೂ ಗುರುಗಳಾದ ಸೋಮಶೇಖರ್ ರವರಿಗೆ ಕೃತಜ್ಞನಾಗಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ, ಕವಿತೆಯೊಂದರ ಸಾಲಿನಂತೆ ಗೆಳೆತನ ಅತಿ ಮಧುರ ಮಾತ್ರವಲ್ಲ ಮಾತ್ರವಲ್ಲ ಅದು ನಿಜಕ್ಕೂ ಅಮರ. ಬಾಲ್ಯ ಮತ್ತು ಹರೆಯದ ಅಂದಿನ ದಿನಗಳನ್ನು ಮರೆಯದೆ ಗೆಳೆಯರ ಸಂತಸಗಳನ್ನು ಆಸ್ವಾದಿಸುವ, ನೋವು ನಲಿವುಗಳಿಗೆ ಮಿಡಿಯುವ ಬಹು ದೊಡ್ಡ ಸಹಪಾಟಿಗಳ ಬಳಗ ನಿಜಕ್ಕೂ ನಮ್ಮ ಹೆಮ್ಮೆ ಎಂದರು.
ಸಹಪಾಟಿಗಳ ಬಳಗದ ಮಕ್ಕಿಮನೆ ಪ್ರಶಾಂತ್ ವೇದಿಕೆಯಲ್ಲಿದ್ದರು. ಎ ಆರ್ ನಾಗಭೂಷಣ, ಅರುಣ್, ಗಿರಿಧರ, ಟಿ ಎಲ್ ಮಂಜುನಾಥ.ಸತೀಶ್ ಎನ್,ಸತೀಶ ವೈ ಎನ್, ನಿರಂಜನ, ಹರೀಶ ಕೆ ಎ, ಕೃಷ್ಣವೇಣಿ ಲೂಯಿಸ್, ಜಾನ್ಸನ್ ಮುಂತಾದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಜಾನಕಿ ಸ್ವಾಗತಿಸಿ,ಕೆ ಸಿ ಗಿರೀಶ ನಿರೂಪಿಸಿ , ಶೀನಿವಾಸ್ ವಂದಿಸಿದರು..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…