
ವಯೋ ನಿವೃತ್ತಿ ಹೊಂದಿದ ತೀರ್ಥಹಳ್ಳಿಯ ಶ್ರೀ ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರನ್ನು ಜೆ ಸಿ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ ಎಸ್ ಮಾತನಾಡಿ,ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ದೇವಪ್ರಸಾದ್ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದವರು . ಈ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದಾಗ ಮಾತ್ರವಲ್ಲದೆ ಬಹಳ ಹಿಂದಿನಿಂದಲೂ ನಾನವರನ್ನು ಬಲ್ಲೆ. ಉತ್ತಮವಾಗಿ ಸೇವೆ ಸಲ್ಲಿಸಿದವರನ್ನು ಅತ್ಯಂತ ಗೌರವದಿಂದ ಬೀಳ್ಕೊಡಬೇಕಿರುವುದು ನಮ್ಮೆಲ್ಲರ ಕರ್ತವ್ಯ.ಇದು ಅವರ ಬಗೆಗಿನ ಅಭಿಮಾನವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಿಗುವ ಒಂದು ಅವಕಾಶ.ಹಾಗಾಗಿ ಕಾರ್ಯದೊತ್ತಡದ ನಡುವೆಯೂ ಅವರಿಗೆ ಖುದ್ದಾಗಿ ಶುಭ ಹಾರೈಸಲು ನಾನಿಲ್ಲಿ ಬಂದಿದ್ದೇನೆ. ಅವರ ನಿವೃತ್ತಿ ಬದುಕಿಗೆ ಹಾರ್ದಿಕವಾಗಿ ಶುಭ ಹಾರೈಸುವುದಾಗಿ ತಿಳಿಸಿದರು. ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ ವಿ ಮಾತನಾಡಿ, ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತರಾಗಲೇ ಬೇಕು. ನಾವೂ ಕೂಡ ಅದರಲ್ಲೊಬ್ಬರು ಎಂಬುದು ನಮ್ಮ ಗಮನದಲ್ಲಿರ ಬೇಕು.ಇತರರನ್ನು ಗೌರವಯುತವಾಗಿ ಕಂಡಾಗ ಮಾತ್ರ ನಮಗೆ ಗೌರವ ದೊರಕಲು ಸಾಧ್ಯ ಒಳ್ಳೆಯದನ್ನು ಮಾಡಿ ಒಳಿತನ್ನು ನಿರೀಕ್ಷಿಸಬಹುದೇ ವಿನಃ ಬೇರಾವುದರಿಂದ ಅದು ಸಾಧ್ಯವಿಲ್ಲ ಎಂಬ ಅರಿವಿರಬೇಕು. ದೇವಪ್ರಸಾದ್ ರಂತವರ ಉದಾರತೆ ಸೌಹಾರ್ಧಯುತ ವ್ಯಕ್ತಿತ್ವ ನಮಗೆ ಮಾದರಿಯಾಗಬೇಕು. ಅವರ ನಿವೃತ್ತ ಬದುಕು ಆರೋಗ್ಯ ನೆಮ್ಮದಿಯಿಂದಲಿ ಎಂದು ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆ ಸಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಭಟ್ ಮಾತನಾಡಿ, ದೇವಪ್ರಸಾದ್ ಉದಾರತೆ ವಿನಮ್ರತೆ ಕರ್ತವ್ಯ ನಿಷ್ಟೆ ಮಾದರಿಯಾದದ್ದು. ಆಸ್ಪತ್ರೆಯ ಲ್ಯಾಬೋರೇಟರಿಯನ್ನು ಸುಸಜ್ಜಿತಗೊಳಿಸುವಲ್ಲಿ ಅವರ ತುಂಬು ಶ್ರಮವಿದೆ.ವಿವಿಧ ಕಾರ್ಯಕ್ರಮಗಳ ಸಂಘಟನೆಗೆ ಅವರು ತೋರುತಿದ್ದ ಆಸಕ್ತಿ,ನೀಡುತಿದ್ದ ಸಹಕಾರ ಸದಾ ಶ್ಲಾಘನೀಯ.ಇಂತಹ ಒಬ್ಬ ಉತ್ತಮ ಸಿಬ್ಬಂದಿಯ ನಿವೃತ್ತಿ ನಮ್ಮ ಸಂಸ್ಥೆಗೆ ದೊಡ್ಡ ನಷ್ಟ. ಆದರೆ ಇದು ಅನಿವಾರ್ಯ.ಬದುಕಿನಲ್ಲಿ ಯಾರೂ ಎಲ್ಲೂ ಖಾಯಂ ಅಗಿ ಉಳಿಯಲು ಸಾಧ್ಯವಿಲ್ಲ. ಅವರ ನಿವೃತ್ತಿ ಬದುಕಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ವೈದ್ಯಾಧಿಕಾರಿಗಳಾದ ಡಾ.ಪ್ರಭಾಕರ್,ಡಾ.ನಿಶ್ಚಲ್, ಡಾ.ಗುರುರಾಜ್,ಮೇಟ್ರನ್ ಜಯಲಕ್ಷ್ಮಿ, ಶುಶ್ರೂಷಣಾಧಿಕಾರಿಗಳಾದ ತನುಜಾ,ಲುಕ್ಮನ್, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಅನುಸೂಯ, ಶರಾವತಿ, ಪ್ರಭಾಕರ ಪೂಜಾರಿ ಮುಂತಾದವರು ಮಾತನಾಡಿ ಅವರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವ ಪ್ರಸಾದ್, ತಮ್ಮ ಕರ್ತವ್ಯದ ಅವಧಿಯಲ್ಲಿ ಸಹಕರಿಸಿ ಬೆಂಬಲಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿ ಧನ್ಯವಾದಗಳನ್ನು ಸಲ್ಲಿಸಿದರು. ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ ಸಿ ಡಿ, ಉಪಾಧ್ಯಕ್ಷೆ ತಿಲಕಮ್ಮ, ಸಂಘಟನಾ ಕಾರ್ಯದರ್ಶಿ ವಿನಾಯಕ ಹೆಚ್ ಜಿ, ಶುಶ್ರೂಷಣಾಧಿಕಾರಿ ಗೀತಾ,ರಾಧಿಕಾ, ಶಾಹಿನಾ, ನಿವೃತ್ತ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ ಕೆ, ನಿವೃತ್ತ ಫಾರ್ಮಸಿ ಅಧಿಕಾರಿ ಸುಭಾಷ್,ತಿಪ್ಪೇಶ್, ಕಾರ್ತಿಕ, ಪ್ರವೀಣ್,ಯಶೋಧ,ಕುಸುಮ ಸೇರಿದಂತೆ ಜೆ ಸಿ ಆಸ್ಪತ್ರೆಯ ವಿವಿಧ ಅಧಿಕಾರಿಗಳು ಸಿಬ್ಬಂದಿಗಳು, ಜಿಲ್ಲಾ ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿಗಳ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತಿಲಕಮ್ಮ ಪ್ರಾರ್ಥಿಸಿ,ಲುಕ್ಮನ್ ಸ್ವಾಗತಿಸಿದರು.ಕ್ಷ ಕಿರಣ ತಂತ್ರಜ್ಞಾಧಿಕಾರಿ ರಾಜಪ್ಪ ಸೊಗಸಾಗಿ ನಿರೂಪಿಸಿ ವಂದಿಸಿದರು.