ತಮ್ಮ ಸುದೀರ್ಘ ಸೇವಾವದಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಲ್ಲದೆ ಸೌಹಾರ್ಧತೆಯ ವ್ಯಕ್ತಿತ್ವದಿಂದಲೂ ನೀಲಮ್ಮ ಇತರರಿಗೆ ಮಾದರಿಯಾಗಿದ್ದಾರೆ.ಜೆ ಸಿ ಆಸ್ಪತ್ರೆಯಲ್ಲಿದ್ದಾಗ ಸಾರ್ವಜನಿಕರು,ಸಹೋದ್ಯೋಗಿಗಳೊಂದಿಗೆ ಅವರ ಸೌಜನ್ಯದ ನಡವಳಿಕೆ ಕರ್ತವ್ಯ ನಿಷ್ಟೆಯನ್ನು ಹತ್ತಿರದಿಂದ ಗಮನಿಸಿದ್ದೇನೆ.
ವಯೋ ನಿವೃತ್ತಿ ಹೊಂದುತ್ತಿರುವ ಸಂಧರ್ಭದಲ್ಲಿ ಅವರ ಸೇವೆಗೆ ಖುದ್ದಾಗಿ ಧನ್ಯವಾದವನ್ನು ಸಲ್ಲಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ನಾನಿಲ್ಲಿಗೆ ಬಂದಿದ್ದೇನೆ. ಅವರ ನಿವೃತ್ತ ಬದುಕಿಗೆ ಹಾರ್ದಿಕವಾಗಿ ಶುಭ ಹಾರೈಸುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ ಎಸ್ ನುಡಿದರು. ಅವರು ವಯೋ ನಿವೃತ್ತಿ ಹೊಂದಿದ ಪ್ರಾ ಆ ಕೇಂದ್ರ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಮೇಗರವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅನಿಕೇತನ್ ಮಾತನಾಡಿ ಮೂವತ್ತೇಳು ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಎಲ್ಲೆಡೆಗಳಲ್ಲೂ ಅವರ ಬಗ್ಗೆ ವ್ಯಕ್ತವಾಗುತ್ತಿರುವ ಪ್ರಶಂಸೆ ಅವರ ಉತ್ತಮ ಕರ್ತವ್ಯ ನಿರ್ವಹಣೆಗೆ ಉದಾಹರಣೆ.ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ ಪುರಸ್ಕಾರಗಳೂ ಸಂದಿರುವುದು ನಿಜಕ್ಕೂ ಸಂತಸದ ವಿಷಯ.ವಯೋ ನಿವೃತ್ತಿಯಿಂದ ಅವರ ಸೇವಾನುಭವದ ಅನುಕೂಲದಿಂದ ಇಲಾಖೆ ವಂಚಿತವಾಗುತ್ತಿದೆ. ನಿವೃತ್ತಿಯ ನಂತರವೂ ಅವರ ಜೀವನೋತ್ಸಾಹ ಹೀಗೆಯೇ ಮುಂದುವರಿಯಲಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ ವಿ, ಸರ್ಕಾರಿ ನೌಕರರಲ್ಲಿ ಮುಖ್ಯವಾಗಿ ಬೇಕಿರುವುದು ತಾಳ್ಮೆ ಮತ್ತು ಸೌಜನ್ಯತೆ. ನೈಜ ಗೌರವ ದಕ್ಕುವುದು ವ್ಯಕ್ತಿತ್ವಕ್ಕೇ ಹೊರತು ಕುರ್ಚಿಗಲ್ಲ ಒಂದಲ್ಲ ಒಂದು ದಿನ ಎಲ್ಲರೂ ಕುರ್ಚಿಯನ್ನು ಬಿಟ್ಟು ಹೊರಡಲೇ ಬೇಕು. ಕುರ್ಚಿಗಷ್ಟೇ ಸೀಮಿತವಾಗಿದ್ದವರನ್ನು ಆ ನಂತರ ಆ ಕುರ್ಚಿಯೇ ಗುರುತಿಸುವುದಿಲ್ಲ. ಇತರರು ಅವರನ್ನು ನೆನಪಿಸಿಕೊಳ್ಳಲೇ ಇಷ್ಟ ಪಡುವುದಿಲ್ಲ. ಸಿಕ್ಕ ಅವಕಾಶದಲ್ಲಿ ಸೌಹಾರ್ಧತೆಯಿಂದ ಹೇಗೆ ಕರ್ತವ್ಯ ನಿರ್ವಹಿಸಬಹುದು ಎಂಬುದಕ್ಕೆ ನೀಲಮ್ಮ ಮಾದರಿಯಾಗಿದ್ದಾರೆ.ಇಂತವರ ಸಕಾರಾತ್ಮಕ ಗುಣಗಳನ್ನು ಎಲ್ಲರೂ ಅದರಲ್ಲೂ ಮುಖ್ಯವಾಗಿ ನಮ್ಮ ಯುವ ಅಧಿಕಾರಿ,ಸಿಬ್ಬಂದಿಗಳು ಅಳವಡಿಸಿಕೊಳ್ಳಬೇಕಿದೆ ಎಂದರು ಸಭೆಯ ಅಧ್ಯಕ್ಷತೆ ವಹಿಸಿದ್ದ ವೈದ್ಯಾಧಿಕಾರಿ ಡಾ.ರಂಜಿತಾ ಎನ್ ಎಸ್ ಮಾತನಾಡಿ, ಅಗಾಧ ಸೇವಾನುಭ ಹೊಂದಿದ್ದ ನೀಲಮ್ಮನವರ ಕರ್ತವ್ಯ ನಿರ್ವಹಣೆ,ಇತರರನ್ನು ಅ ನಿಟ್ಟಿನಲ್ಲಿ ಪ್ರೇರೇಪಿಸುತಿದ್ದ ರೀತಿ, ಹೊಂದಾಣಿಕೆಯ ವ್ಯಕ್ತಿತ್ವ ಮಾದರಿಯಾದದ್ದು. ಅವರ ನಿವೃತ್ತಿ ನಿಜಕ್ಕೂ ನಮ್ಮ ಸಂಸ್ಥೆಗಾಗುತ್ತಿರುವ ನಷ್ಟ ಎಂದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷೆ ಗೀತಾ ಎಲ್, ನಿರ್ದೇಶಕಿ ಉಷಾ ಕೆ ಡಿ,ಆರೋಗ್ಯ ಇಲಾಖಾನೌಕರರ ಸಂಘದ ಖಜಾಂಚಿ ರಾಘವೇಂದ್ರ ಸಿ ಡಿ, ಉಪಾಧ್ಯಕ್ಷರುಗಳಾದ ಅನುಸೂಯ ಅನಿತ ತಿಲಕಮ್ಮ ಅತಿಥಿಗಳಾಗಿದ್ದರು. ಶುಶ್ರೂಷಣಾಧಿಕಾರಿ ನಿರ್ಮಲ, ಪ್ರಾ.ಆ ಸುರಕ್ಷಾಧಿಕಾರಿಗಳಾದ ನಾಗರತ್ನ ಎ ಜಿ, ವೀಣಾ ಎಂ ಪಿ, ಕುಸುಮ ಹಿ ಪ್ರಾ ಆ ಸುರಕ್ಷಾಧಿಕಾರಿ ನಾಗವೇಣಿ, ಆಶಾ ಕಾರ್ಯಕರ್ತೆಯರಾದ ತೇಜಾವತಿ,ರೇಖಾ,ಲಕ್ಷ್ಮಿ, ಪ್ರಭಾವತಿ ಮುಂತಾದವರು ನೀಲಮ್ಮನವರ ಸೇವೆಯನ್ನು ಸ್ಮರಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೀಲಮ್ಮನವರು ತಮ್ಮ ಸೇವಾವದಿಯ ನೆನಪುಗಳನ್ನು ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು .
ಆರೋಗ್ಯ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳಾದ ಕೃಷ್ಣಮೂರ್ತಿ,ಸಂತೋಷ್,ಗಿರಿ, ಶಬರೀಶ್, ಆಶಾ, ಮತ್ತಿತರರು ಸೇರಿದಂತೆ ಪ್ರಾ ಆ ಕೇಂದ್ರ ಮೇಗರವಳ್ಳಿ ಮತ್ತು ಆಗುಂಬೆಯ ಸಿಬ್ಬಂದಿಗಳು ಮತ್ತು ಮೇಗರವಳ್ಳಿ ಕೇಂದ್ರದ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಫಾರ್ಮಸಿ ಅಧಿಕಾರಿ ಸನ್ನಿಧಿ ಸ್ವಾಗತಿಸಿ, ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ ನಿರೂಪಿಸಿ,ಪ್ರ ದ ಸಹಾಯಕ ನವೀನ್ ಕುಮಾರ್ ವಂದಿಸಿದರು.