ಯಾವುದೇ ಪ್ರತಿಫಲಾಕ್ಷೆಗಳಿಲ್ಲದೆ ಕೆಲವು ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಇಲಾಖೆಯ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಹಕರಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಪ್ರಾ ಆ ಕೇಂದ್ರ ಮೇಗರವಳ್ಳಿಯಲ್ಲಿ ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ,ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಸಿಬ್ಬಂದಿ ಕೊರತೆಯ ನಡುವೆ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಷೇತ್ರ ಸಿಬ್ಬಂದಿಗಳಿಗೆ ಎಲ್ಲಾ ಆಶಾ ಕಾರ್ಯಕರ್ತೆಯರು ಉತ್ತಮ ಸಹಕಾರ ನೀಡುತಿದ್ದಾರೆ. ತಮ್ಮ ಜವಬ್ದಾರಿಗಿಂತಲೂ ಕೆಲವು ಹೆಚ್ಚಿನ ಕಾರ್ಯ ನಿರ್ವಹಿಸುವ ಮೂಲಕ ಸಹಾಯ ಮಾಡುತಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತಿದ್ದಾರೆ. ಯಾವುದೇ ಪ್ರೋತ್ಸಾಹ ಧನವಿಲ್ಲದೆಯೂ ಎನ್ ಸಿ ಡಿ ಪೋರ್ಟಲ್ ನಲ್ಲಿ ಆಭಾ ಸಂಖ್ಯೆ ದಾಖಲಿಸುವ ಕಾರ್ಯಕ್ಕೆ ವಿಶೇಷ ಸಹಕಾರ ನೀಡುತಿದ್ದಾರೆ. ಉತ್ತಮ ಕಾರ್ಯಗಳನ್ನು ಗುರುತಿಸಿ ಗೌರವಿಸುವ ಮೂಲಕ ಆಶಾ ಕಾರ್ಯಕರ್ತೆಯರ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ರೀತಿಯಾಗಿ ವಿಶೇಷ ನಿರ್ವಹಣೆ ತೋರುವ ಎಲ್ಲಾ ಆಶಾ ಕಾರ್ಯಕರ್ತೆಯರನ್ನೂ ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ನಡೆಸುವ ಉದ್ದೇಶ ನಮ್ಮದು. ಆರೋಗ್ಯ ಇಲಾಖೆ ನಮ್ಮ ಕುಟುಂಬ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದನ್ನು ಅರಿತು. ಪರಸ್ಪರ ಸೌಹಾರ್ಧತೆಯಿಂದ ಕರ್ತವ್ಯ ನಿರ್ವಹಿಸಿದಾಗ ಸಮಾಜಕ್ಕೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸಾಧ್ಯ.ಈ ದಿಸೆಯಲ್ಲಿ ಎಲ್ಲರ ಸಹಕಾರವಿರಲಿ ಎಂದರು.
ವೈದ್ದಾಧಿಕಾರಿ ಡಾ.ರಂಜಿತ ಎನ್ ಎಸ್ ಮಾತನಾಡಿ, ತೀವ್ರ ಒತ್ತಡದ ನಡುವೆಯೂ ನಮ್ಮೆಲ್ಲಾ ಸಿಬ್ಬಂದಿಗಳೂ,ಆಶಾ ಕಾರ್ಯಕರ್ತೆಯರೂ ಸಾಕಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಇಂತಹ ಕಾರ್ಯಕ್ರಮಗಳು ನಮ್ಮೊಳಗಿನ ಸಾಮರಸ್ಯ, ಉತ್ಸಾಹವನ್ನು ಹೆಚ್ಚು ಮಾಡುತ್ತವೆ. ಪರಿಣಾಮಕಾರಿ ಕರ್ತವ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಸನ್ಮಾನಿತರ ಪರವಾಗಿ ಆಶಾ ಕಾರ್ಯಕರ್ತೆ ಅಕ್ಷತಾ ಮಾತನಾಡಿ, ನಮ್ಮಿಂದ ಸಮಾಜಕ್ಕೆ ಒಂದಿಷ್ಟು ಸೇವೆ ಮಾಡುವ ಅವಕಾಶ ಈ ರೀತಿಯಲ್ಲಿ ಸಿಕ್ಕಿದೆ ಎಂದು ಭಾವಿಸಿ ಕೆಲಸ ನಿರ್ವಹಿಸುತಿದ್ದೇವೆ. ಈ ರೀತಿಯ ಗೌರವಗಳು ಖಂಡಿತಾ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಿವೆ. ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಂಡು ಉತ್ತಮ ಸೌಹಾರ್ಧತೆ ಮೂಡಿಸುವ ಕಾರ್ಯವನ್ನು ನಮ್ಮ ತಾಲ್ಲೂಕಿನಲ್ಲಿ, ಆರೋಗ್ಯ ಇಲಾಖಾ ನೌಕರರ ಸಂಘ ನಿರಂತರವಾಗಿ ಮಾಡುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ನಮ್ಮ ಅದೃಷ್ಟ ಎಂಬ ಭಾವನೆ ನನ್ನದು ಎಂದರು.
ಆಶಾ ಕಾರ್ಯಕರ್ತೆ ತೇಜಾವತಿ ಮಾತನಾಡಿ, ನಮ್ಮ ಒಳ್ಳೆಯ ಕಾರ್ಯವನ್ನು ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ. ಇನ್ನಷ್ಟು ಉತ್ತಮವಾಗಿ ನಮ್ಮಿಂದಾದಷ್ಟು ಸೇವೆಯನ್ನು ಮಾಡುವ ಪ್ರೇರಣೆ ದೊರಕಿದೆ.ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಆಶಾ ಕಾರ್ಯಕರ್ತೆಯರಾದ ತೇಜಾವತಿ,ರೂಪ, ಅಕ್ಷತಾರವರಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.
ಶುಶ್ರೂಷಣಾಧಿಕಾರಿ ನಿರ್ಮಲ ಎಂ ಎನ್ ,ಪ್ರಾ ಆ ಸುರಕ್ಷಾಧಿಕಾರಿಗಳಾದ ನಾಗರತ್ನ ಎ ಜಿ, ವೀಣಾ ಎಂ ಪಿ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಆಶಾ, ಡಿ ದರ್ಜೆ ನೌಕರರಾದ ಪಾರ್ವತಿ ಮತ್ತು ಪ್ರಾ ಆ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಇದ್ದರು.