
ಶಿವಮೊಗ್ಗ: ಮಕ್ಕಳಿಗೆ ಗ್ರಾಮೀಣ ಪ್ರದೇಶದ ಪರಿಚಯ ಹಾಗೂ ಮಲೆನಾಡಿನ ಸೊಬಗು ತಿಳಿಯಬೇಕು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿವಮೊಗ್ಗ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳ ನಡಿಗೆ ಕೃಷಿ ಕ್ಷೇತ್ರದ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮ ಮಕ್ಕಳಲ್ಲಿ ರೈತರ ಶ್ರಮದ ಮಹತ್ವ ಅರಿತುಕೊಳ್ಳುವ ಮನೋಭಾವ ಬೆಳೆಸುತ್ತದೆ. ಪ್ರತಿಯೊಬ್ಬರಿಗೂ ಪ್ರಕೃತಿಯ ಬಗ್ಗೆ ಗೌರವ ಮೂಡಿಸುತ್ತದೆ. ಆಹಾರ ಭದ್ರತೆ ಹಾಗೂ ಸ್ಥಿರ ಜೀವನಶೈಲಿಯ ಬಗ್ಗೆ ಜಾಗೃತಿ ತರಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಮಕ್ಕಳಿಗೆ ಕೃಷಿ ಮತ್ತು ಗ್ರಾಮೀಣ ಜೀವನದ ನೇರ ಅನುಭವ ಕಲ್ಪಿಸುವ ಉದ್ದೇಶದಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ಆ.28ರಿಂದ 30ರವರೆಗೆ ಶಿವಮೊಗ್ಗದಲ್ಲಿ ಕೃಷಿ ಶಿಬಿರ ಆಯೋಜಿಸಲಾಗಿದೆ ಎಂದರು.
ಈ ಶಿಬಿರವು ನಗರ ಜೀವನ ಮತ್ತು ಕೃಷಿ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ, ಭಾಗವಹಿಸಿದ ಮಕ್ಕಳಿಗೆ ಕೃಷಿ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡಿತು. ಮಕ್ಕಳು ಬೀಜ ಬಿತ್ತನೆ, ಮಣ್ಣಿನ ಸಿದ್ಧತೆ ಹಾಗೂ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ವಿಧಾನಗಳ ಅಧ್ಯಯನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಶಿಬಿರವು ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧಿಯಾ, ಜಿಲ್ಲಾ ಮುಖ್ಯ ಆಯುಕ್ತ ಡಾ. ಪ್ರಸನ್ನಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಶೇಷಾದ್ರಿ ಹಾಗೂ ಶಿಬಿರದ ಆಯೋಜಕ ರಾಜ್ಯ ಸಹ ಸಂಘಟನಾ ಆಯುಕ್ತ ನಿತಿನ್ ಅಮೀನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಆಯುಕ್ತರಾದ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಮಲ್ಲಿಕಾರ್ಜುನ ಕಾನೂರು, ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಉಪಸ್ಥಿತರಿದ್ದರು.

