231

ಬೆಂಗಳೂರು : ವಕೀಲ ವೃತ್ತಿ ಆರಂಭಿಸುವ ಯುವ ವಕೀಲರು ಟ್ರಯಲ್ ಕೋರ್ಟ್ನಲ್ಲಿ ವೃತ್ತಿ ಜೀವನ ಆರಂಭಿಸುವುದು ಉತ್ತಮ, ಏಕೆಂದರೆ ಇಲ್ಲಿ ಸಿಗುವ ಉತ್ತಮವಾದ ವೃತ್ತಿ ಅನುಭವ ಎಲ್ಲಿಯೂ ಸಿಗಲಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಸಲಹೆ ನೀಡಿದರು.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಉಪಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಅವರೊಂದಿಗೆ ಶನಿವಾರ ನ್ಯಾಯಮಿತ್ರ ಸಹಕಾರಿ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಬೆಳ್ಳಿ ಮಹೋತ್ಸವವು ಸ್ಥಿರತೆ, ಬಾಂಧವ್ಯ, ಬದ್ಧತೆ ಮತ್ತು ಸಾಧನೆಯ ಪ್ರತೀಕವಾಗಿದೆ” ಎಂದು ಹೇಳಿದರು.
“ನನ್ನ ವೃತ್ತಿ ಜೀವನ ಆರಂಭ ಆಗಿದ್ದು ವಕೀಲರ ಸಹಕಾರಿ ಸಂಘದಲ್ಲಿ. ನನ್ನ ಎಲ್ಲಾ ಸಾಧನೆಯೂ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನ ಸಹಕಾರಿ ಬ್ಯಾಂಕ್ಗೆ ಸಲ್ಲುತ್ತದೆ” ಎಂದರು. “ವಕೀಲ ವೃತ್ತಿ ಆರಂಭಿಸುವವರಿಗೆ ಟ್ರಯಲ್ ಕೋರ್ಟ್ನಲ್ಲಿ ನಿಮ್ಮ ವೃತ್ತಿ ಆರಂಭಿಸಿ ಎಂದು ನಾನು ಸಲಹೆ ನೀಡುತ್ತೇನೆ. ಏಕೆಂದರೆ ಇಲ್ಲಿ ಸಿಗುವ ಉತ್ತಮವಾದ ವೃತ್ತಿ ಅನುಭವ ಎಲ್ಲಿಯೂ ಸಿಗಲಾರದು. ವಕೀಲರು ಸಮಾಜ ಬದಲಾಯಿಸುವ ವೈದ್ಯರಿದ್ದಂತೆ. ಸಮಾಜ ಮತ್ತು ದೇಶವನ್ನೇ ಬದಲಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ವಕೀಲರಿಗೆ ಇದೆ” ಎಂದು ತಾವು ವಕೀರಾಗಲು ಕಾರಣವಾದ ಹಿನ್ನಲೆಯನ್ನು ಹಂಚಿಕೊಂಡರು.
“ವಕೀಲರಿಗಾಗಿ ವಸತಿ ನಿವೇಶನಗಳನ್ನು ದೊಡ್ಡ ಪ್ರಮಾಣದಲ್ಲಿ (ಬಲ್ಕ್) ಮಂಜೂರು ಮಾಡುವಂತೆ ಮತ್ತು ವಕೀಲರಿಗೆ ಒಂದು ಸಮುದಾಯ ಭವನ ನಿರ್ಮಾಣ ಮಾಡಲು ಅಗತ್ಯ ಇರುವ ಭೂಮಿ ನೀಡುವಂತೆ” ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ.ಆರ್. ಅರವಿಂದ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.


