
ಕಮಲಾ ನೆಹರು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ::
ಸಾತ್ವಿಕ ಅಂಶಗಳತ್ತ ಚಿತ್ತ ಅಗತ್ಯ:ಪ್ರೊ.ಅಣ್ಣಯ್ಯ ನಾಯಕ
ಶಿವಮೊಗ್ಗ: ಪುಸ್ತಕಗಳಲ್ಲಿ ಬದುಕಿಗೆ ಬೇಕಾಗಿರುವ ಸಾತ್ವಿಕತೆಯ ಅಂಶಗಳಿರುತ್ತಿದ್ದು ಅವುಗಳ ಬಗ್ಗೆ ಚಿಂತನೆ ಮಾಡುವ ಮನಸುಗಳು ಬೇಕಾಗಿವೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಕನ್ನಡ ನಿವೃತ್ತ ಪ್ರಾಧ್ಯಾಪಕರಾದ ಡಿ.ಎಂ.ಅಣ್ಣಯ್ಯ ನಾಯಕ ಅವರು ಹೇಳಿದರು.
ಅವರು ಆ ಕಾಲೇಜಿನ ಕುವೆಂಪು ಗ್ರಂಥಾಲಯವು ಇಂದಿನಿಂದ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಯುವ ಸಮೂಹ ಅತಿಯಾದ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಓದುವ ಹವ್ಯಾಸವನ್ನೇ ಮರೆತಂತಾಗಿದೆ. ಮಾನಸಿಕ ನೆಮ್ಮದಿ ಪಡೆದು ಜೀವನ ನಡೆಸಲು ಅವಶ್ಯಕವಾಗಿರುವ ಪುಸ್ತಕ ಓದಿನಿಂದ ಜನರು ದೂರವಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಈ ಕಾಲೇಜು ವಿದ್ಯಾರ್ಥಿಗಳಿಂದಲೇ ಆಯ್ದ ಪುಸ್ತಕಗಳನ್ನು ಓದಿಸಿ ಅವುಗಳ ಬಗ್ಗೆ ಇತರರಿಗೆ ಮಾಹಿತಿ ನೀಡುವ ಕೆಲಸ ಆರಂಭಿಸಿದ್ದು ಶ್ಲಾಘನೀಯ ಎಂದು ಅವರು ಬಣ್ಣಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ದರಾ.ಬೇಂದ್ರೆ, ಕುವೆಂಪು ಮತ್ತಿತರ ಪ್ರಸಿದ್ಧ ಸಾಹಿತಿಗಳು ಆಯಾ ಕಾಲ ಘಟ್ಟಗಳಲ್ಲಿ ಜನಸಾಮಾನ್ಯರಿಗೆ ಓದಲು ಸಾಧ್ಯವಾಗುವ ಕೃತಿಗಳನ್ನು ರಚಿಸಿ ನಮಗೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಅವುಗಳ ಪ್ರಯೋಜನವನ್ನು ಇಂದಿನ ವಿದ್ಯಾಥಿ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಷ್.ಎಸ್.ನಾಗಭೂಷಣ ಅವರು ಒಂದು ದಿನದ ಸಂತೋಷಕ್ಕೆ ಒಂದು ಊಟ, ಒಂದು ತಿಂಗಳ ಸಂತೋಷಕ್ಕೆ ಒಂದು ಪ್ರವಾಸ, ಒಂದು ವರ್ಷದ ಸಂತೋಷಕ್ಕೆ ಮದುವೆ ಆಗಬೇಕು. ಅಷ್ಟಕ್ಕೇ ಆ ಸಂತೋಷಗಳು ಸೀಮಿತವಾಗುತ್ತವೆ. ಆದರೆ ಪಂದು ಪುಸ್ತಕದ ಓದು ಮಸ್ತಕಕ್ಕೆ ಹೋಗಿ ಇಡೀ ಜೀವನ ಪರ್ಯಂತ ಮನುಷ್ಯ ಸಂತೋಷದಿಂದ ಇರುವಂತೆ ಮಾಡುತ್ತದೆ ಎಂದು ಇಂಗ್ಲಿಷಿನ ಪ್ರಸಿದ್ಧ ಕವಿ ವಡ್ರ್ಸ್ ವಥ್೯ನ ಸಾಲುಗಳನ್ನುದ್ಧರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿ.ಎ.ದ್ವಿತೀಯ ವರ್ಷದ ಅಶ್ವಿನಿ ಎ.ಕೆ.ಅವರು ಆನಂದಕಂದರ ‘ನಾ ಕೊಂದ ಹುಡುಗಿ’ ಕೃತಿ ಕುರಿತು ಮಾತನಾಡಿದರು.ಪ್ರಾಧ್ಯಾಪಕರು, ಸಿಬ್ಬಂದಿಗಳಾದ ನಾರಾಯಣ, ಶ್ರೀಮತಿ ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಗ್ರಂಥಪಾಲಕರಾದ ರವಿಕುಮಾರ ಎಚ್.ಎನ್. ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು...
ರಘುರಾಜ್ ಹೆಚ್.ಕೆ…9449553305…