ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ದಿನಾಚರಣೆಯಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಮಕ್ಕಳ ಧೈರ್ಯ ಮತ್ತು ಸಾಹಸ ಪ್ರಕರಣವು 2020 ರ ಆಗಸ್ಟ್ ನಿಂದ 2021 ರ ಜುಲೈ ಒಳಗೆ ಜರುಗಿರಬೇಕು. ದಿನಾಂಕ: 01-03-2003 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಮಕ್ಕಳ ಅಸಾಧಾರಣ ಧೈರ್ಯ, ಶೌರ್ಯವನ್ನು ಪ್ರದರ್ಶಿಸಿದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಶಾಲಾ ಶಿಕ್ಷಕರು ಮಕ್ಕಳ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ತಿಳಿಸಬಹುದು.
ಅರ್ಜಿಯೊಂದಿಗೆ ಮಗುವಿನ ಎರಡು ಭಾವಚಿತ್ರ, ಶೌರ್ಯ ಸಾಧನೆ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ(ಎಫ್ಐಆರ್), ಜನ್ಮ ದಿನಾಂಕದ ಬಗ್ಗೆ ನಗರಗಳಲ್ಲಿ ಮಹಾನಗರಪಾಲಿಕೆ, ಗ್ರಾ.ಪಂ ಮಟ್ಟದಲ್ಲಿ ತಾಲ್ಲೂಕು ತಹಶೀಲ್ದಾರರಿಂದ ದೃಢೀಕರಣ ಪಡೆದಿರಬೇಕು. ಧೈರ್ಯ, ಶೌರ್ಯ ತೋರಿದ ಬಗ್ಗೆ ಪತ್ರಿಕಾ ಪ್ರಕಟಣೆಗಳು ಹಾಗೂ ಘಟನೆಯ ವಿವರವಾದ ವರದಿ ಸಲ್ಲಿಸಬೇಕು. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ.10,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
2021-22 ನೇ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30 ರೊಳಗೆ ಈ ಕಚೇರಿಗೆ ಸಲ್ಲಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…