
ಶಿವಮೊಗ್ಗ : ನಗರದ ಬೊಮ್ಮನಕಟ್ಟೆಯ ಎಫ್ ಬ್ಲಾಕಿನ ಹಿಂಭಾಗದ ಅಂಚಿನಲ್ಲಿ ಮಹಾನಗರ ಪಾಲಿಕೆಯು ಒಂದಷ್ಟು ಸಿಎ ಸೈಟ್ ಮತ್ತು ಖರಾಬು ಜಾಗವನ್ನು ಬಿಟ್ಟಿದ್ದು ಈಗ ಈ ಪಾಲಿಕೆ ಜಾಗದಲ್ಲಿ ಕಾನೂನು ಬಾಹಿರ ಶೆಡ್ ಗಳು, 30×40 ಅಡಿ ನಿವೇಶನದಲ್ಲಿ ಅನಧಿಕೃತ ಮನೆಗಳು ನಿರ್ಮಾಣವಾಗಿವೆ.

ಈ ಕುರಿತು ಈಗಾಗಲೇ ಪಾಲಿಕೆ ಗಮನಕ್ಕೆ ತಂದರೂ ಇನ್ನೂ ಯಾವ ಕ್ರಮವಾಗಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅನಧೀಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಇದು ಹೇಗೆ? ನಿನ್ನೆ ದಿನ ಓರ್ವರು ತಮ್ಮ ಅನಧೀಕೃತ ಮನೆಗೆ ಯುಜಿಡಿ ಸಂಪರ್ಕ ಕಲ್ಪಿಸಲು ಉತ್ತಮ ಗುಣ ಮಟ್ಟದ ಡಾಂಬರ್ ರಸ್ತೆ ಅಗೆದು ಹಾಳುಗೆಡವಿದ್ದಾರೆ.
ಇದರ ಬಗ್ಗೆ ಪಾಲಿಕೆಯ ಇಂಜಿನೀಯರ್ ವಿಷ್ಣು ದೀಕ್ಷಿತರಿಗೆ ತಿಳಿಸಲಾಗಿ ಅವರು ಸ್ಥಳಕ್ಕಾಗಮಿಸಿ ಇದೊಂದು ಮನೆಯವರು ಸಂಪರ್ಕ ಮಾಡಿಕೊಳ್ಳಲಿ. ಬೇರೆಯವರಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾಗಿ ಸ್ಥಳೀಯರು ಹೇಳುತ್ತಾರೆ. ಪಾಲಿಕೆ ಪರವಾನಿಗೆ ಇದ್ದರೆ ತಮ್ಮದೇನೂ ಅಭ್ಯಂತರ ಇಲ್ಲ. ಆದರೆ ಪರವಾನಿಗೆ ತೋರಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಪರವಾನಿಗೆ ಇಲ್ಲದ ಜಾಗದಲ್ಲಿ ಕಟ್ಟಿದ ಕಟ್ಟಡಕ್ಕೆ ಕಾನೂನು ಬಾಹಿರವಾಗಿ ಅಧಿಕಾರಿಗಳು ಹೇಗೆ ಸಮ್ಮತಿ ಸೂಚಿಸುತ್ತಾರೆ. ಇದರಲ್ಲಿ ಏನೋ ಗೋಲ್ ಮಾಲ್ ನಡೆದಿದೆ . ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಅತಿಕ್ರಮಣದ ಕುರಿತು ಸಮಗ್ರ ತನಿಖೆ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆಯ ನೂತನ ಆಯುಕ್ತರು ಇತ್ತ ಗಮನ ಹರಿಸಬೇಕು.