ಐಪಿಎಲ್ ಪಂದ್ಯಾವಳಿ ಕ್ರಿಕೆಟ್ ಜ್ವರ ಜೋರಾಗಿದೆ ಇದರ ಬೆನ್ನಲ್ಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆ ವ್ಯಾಪಕವಾಗಿದೆ..
ಪೋಷಕರಲ್ಲಿ ಸಹಜವಾಗಿ ಆತಂಕ ಮನೆಮಾಡುತ್ತದೆ..
ಹತ್ತನೇ ತರಗತಿ , ಪಿಯುಸಿ , ಪದವಿ ಪರೀಕ್ಷೆಗಳು ಪ್ರಾರಂಭವಾಗುವ ಸಮಯದಲ್ಲೇ ಐಪಿಎಲ್ ಆರಂಭವಾಗುವುದು ಎಲ್ಲರಿಗೂ ಸಹಜವಾಗಿ ಚಿಂತೆಗೀಡು ಮಾಡುತ್ತದೆ ..
ಮಕ್ಕಳು ಓದಿದ್ದು ಮರೆತು ಹೋಗುವಂತೆ ಕ್ರಿಕೆಟ್ ನೋಡಿಕೊಂಡು ಕೂರುತ್ತಾರೆ..
ಜೊತೆಗೆ ಬೆಟ್ಟಿಂಗ್ ದಂಧೆ ಕೂಡ ಜೋರಾಗಿ ನಡೆಯುತ್ತಿದೆ..
ಈ ಬೆಟ್ಟಿಂಗ್ ಹೇಗೆ ಅಂದರೆ ಬೆಟ್ಟಿಂಗ್ ಕಟ್ಟುವ ಮೊದಲು ತಮಗೆ ಬೇಕಾದ ತಂಡ ಗೆಲ್ಲಬೇಕೆಂದು ಆ ತಂಡದ ಯಶಸ್ಸಿಗೆ ಇಷ್ಟದೈವದ ಮೊರೆಹೋಗಿ ಬೇಡಿಕೊಳ್ಳುವುದು ಅಲ್ಲದೆ ಪರ್ಸೆಂಟೇಜ್ ಲೆಕ್ಕದಲ್ಲಿ ದೇವರಿಗೂ ಲಂಚವನ್ನು ಕೊಡುವ ಆಮಿಷವನ್ನು ತೋರುತ್ತಾರೆ..
ಕ್ರಿಕೆಟ್ ಇದೊಂದು ಅತ್ಯುತ್ತಮ ಆಟ ಆದರೆ ಈ ಆಟ ನಿಧಾನವಾಗಿ ಮನರಂಜನೆಯ ಹೆಸರಿನಲ್ಲಿ ಲಗ್ಗೆ ಇಟ್ಟಿದ್ದು ಈಗ ದೊಡ್ಡ ಉದ್ಯಮವಾಗಿ ಬೆಳೆಯುವುದರ ಜೊತೆಗೆ ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟಿರುವುದು ಶಾಪವೋ ವರವೋ..?
ಆರ್ಥಿಕವಾಗಿ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಪ್ರಬಲವಾಗಿ ಅಂತೂ ಕಾರಣವಾಗುತ್ತಿರುವುದರಿಂದ ಮುಂದಿನ ಭವಿಷ್ಯದ ಬಗ್ಗೆ ಆತಂಕವಂತೂ ಸೃಷ್ಟಿ ಮಾಡಿದೆ..
ದೇಶದಲ್ಲಿ ಐಪಿಎಲ್ ಸಂಸ್ಕೃತಿ ಅತ್ಯಂತ ಗಣನೀಯವಾಗಿ ಬೇರುಬಿಟ್ಟಿದೆ..
ಈ ಕ್ರಿಕೆಟ್ ಪಂದ್ಯ ವಿದ್ಯಾರ್ಥಿಗಳ ಪರೀಕ್ಷೆಯ ಸಮಯದಲ್ಲಿ ಬೇಕಾ..?
ಎಲ್ಲದರಲ್ಲೂ ತಾವೇ ಅತಿ ಶ್ರೇಷ್ಠರು ಎಂಬ ಪ್ರತಿಷ್ಠೆ ಬೆಳೆಸಿಕೊಳ್ಳುವ ಆಡಳಿತ ಮಂಡಳಿಗೆ ಈ ಆಟದಿಂದ ಹೇಗೆಲ್ಲಾ ತೊಂದರೆಗಳು ಆಗುತ್ತಿದೆ ಎಂಬ ಪರಿಜ್ಞಾನ ಕೂಡ ಇಲ್ಲದೆ ಇರುವುದು ಅತ್ಯಂತ ಶೋಚನೀಯ..!
ನಮ್ಮ ದೇಶ ಪ್ರಬುದ್ಧ ರಾಷ್ಟ್ರವಾಗಬೇಕಾದರೆ ಮೊದಲು ಮಕ್ಕಳ ಭವಿಷ್ಯ ಅತ್ಯಂತ ಮುಖ್ಯವಾಗಬೇಕು.. ಎಲ್ಲಾ ಪರೀಕ್ಷೆಗಳು ಪ್ರಾರಂಭವಾಗುವ ಸಮಯದಲ್ಲೇ ಇಂಥ ಕ್ರೀಡೆಯನ್ನು ಆಡಲು ಅವಕಾಶ ಕೊಟ್ಟು ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಗಮನಕೊಡಿ ಎಂದು ಸಂದೇಶವನ್ನು ಕೊಟ್ಟರೆ ಕ್ರಿಕೆಟ್ ನೋಡುವುದನ್ನು ಬಿಡುತ್ತಾರೆಯೇ..?
ಇಷ್ಟೇ ಅಲ್ಲದೆ ಅದೆಷ್ಟೋ ಕುಟುಂಬದ ಪರಿಸ್ಥಿತಿಗಳು ತೀರ ಹದಗೆಟ್ಟರೂ ಬೆಟ್ಟಿಂಗ್ ಕಟ್ಟಿ ಅದರೊಂದಿಗೆ ಅದೋಗತಿಗೆ ಇಳಿಯುತ್ತಿದ್ದಾರೆ..
ಅದೆಷ್ಟೋ ಮನೆಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ಹಾಗೆ ಬೆಟ್ಟಿಂಗ್ ದಂದೆಗೆ ಹಿರಿಯರು ಕಿರಿಯರು ಎನ್ನದೆ ಇಳಿದಿದ್ದಾರೆ..
ಒಂದು ಕಾಲಕ್ಕೆ ಸಭ್ಯರ ಆಟ ಎಂದು ಜನಪ್ರಿಯವಾಗಿದ್ದ ಈ ಕ್ರೀಡೆಗೆ ಇತ್ತೀಚೆಗೆ ಭಾರಿ ಕಳಂಕ ಅಂಟಿದೆ..
ಇದಕ್ಕೆ ಮೂಲಕಾರಣ “ಮ್ಯಾಚ್ ಫಿಕ್ಸಿಂಗ್” ಮ್ಯಾಚ್ ಫಿಕ್ಸಿಂಗ್ ಗೆ ಕಾರಣ” ಬೆಟ್ಟಿಂಗ್”, ಬೆಟ್ಟಿಂಗ್ ಬರೀ ಕ್ರಿಕೆಟ್ ಪಂದ್ಯದ ಮೇಲೆ ಮಾತ್ರ ನಡೆಯುತ್ತದೆ ಎಂದೇನಿಲ್ಲ..
ಟೆನಿಸ್ , ಫುಟ್ಬಾಲ್ , ಕುದುರೆ ರೇಸ್ , ಬೇಸ್ಬಾಲ್ , ಬ್ಯಾಸ್ಕೆಟ್ಬಾಲ್ , ಬಾಕ್ಸಿಂಗ್ , ವಾಲಿಬಾಲ್ ಸೇರಿದಂತೆ ಹಲವಾರು ಕ್ರೀಡೆಗಳ ಮೇಲು ನಡೆಯುತ್ತದೆ ..
ಆದರೆ ಭಾರತದಲ್ಲಿ ಕ್ರಿಕೆಟ್ ಮೇಲೆ ಜೂಜು ಹೆಚ್ಚು ನಡೆಯುತ್ತದೆ..
ಕ್ರಿಕೆಟ್ ಪಂದ್ಯಗಳು ಹಗಲೇ ನಡೆಯಲಿ ಅಥವಾ ರಾತ್ರಿಯೇ ನಡೆಯಲಿ ಬೆಟ್ಟಿಂಗ್ ಆಡುವವರ ಕಣ್ಣುಗಳು ಮಾತ್ರ 24 ಗಂಟೆಗಳು ಜಾಗೃತವಿರುತ್ತದೆ..
ನಿದ್ದೆ , ಊಟ ಕೆಲಸಗಳನ್ನು ಬಿಟ್ಟು ಪಂದ್ಯಗಳನ್ನು ವೀಕ್ಷಿಸುತ್ತಾರೆ..
ಯುವಕರು ಬೆಟ್ಟಿಂಗ್ ನಲ್ಲಿ ತೊಡಗುತ್ತಿದ್ದಾರೆ ಹಾಗೆ ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ..
ಕ್ರಿಕೆಟ್ ಪಂದ್ಯ ಶುರುವಾದಾಗಿನಿಂದ ಯುವಕರನ್ನೇ ಹೆಚ್ಚು ಆಕರ್ಷಿಸುವಲ್ಲಿ ಯಶಸ್ವಿ ಕೂಡ ಆಗುತ್ತಿದೆ..
ಸಂಜೆಯಾಗುತ್ತಿದ್ದಂತೆಯೇ ಟಿವಿ ಅಥವಾ ಮೊಬೈಲ್ಗಳಲ್ಲಿ ಕ್ರಿಕೆಟ್ ವೀಕ್ಷಿಸುತ್ತಾ ಸೋಮಾರಿಗಳಂತೆ ಕಾಲಹರಣ ಮಾಡುವುದರಲ್ಲಿ ನಿರತರಾಗುತ್ತಿದ್ದಾರೆ ಆಡುವವರು ಕೆಲವೇ ಕೆಲವು ಮಂದಿಯಾದರೂ ಕೋಟಿಗಟ್ಟಲೆ ಜನರು ಕೆಲಸವಿಲ್ಲದೆ ಕ್ರೀಡೆ ನೋಡುತ್ತಾ ಸೋಮಾರಿಗಳಾಗುತ್ತಾರೆ..
ಈ ಬೆಟ್ಟಿಂಗ್ ದಂಧೆ ಪಟ್ಟಣಗಳು ಅಲ್ಲದೆ ಸಣ್ಣಪುಟ್ಟ ಹಳ್ಳಿಗಳಲ್ಲಿಯೂ ಜೋರಾಗಿಯೇ ಹಬ್ಬಿದೆ ಕಾಲೇಜು ವಿದ್ಯಾರ್ಥಿಗಳು , ಯುವಕರು , ಚಿಕ್ಕಪುಟ್ಟ ಮಕ್ಕಳಿಂದ ಹಿಡಿದು ವ್ಯಾಪಾರಿಗಳು , ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಬೆಟ್ಟಿಂಗ್ ದಂಧೆಗೆ ದಾಸರಾಗುತ್ತಿದ್ದಾರೆ..
ಸಾರ್ವಜನಿಕ ಸ್ಥಳಗಳಲ್ಲಿಯೇ ಬೆಟ್ಟಿಂಗ್ ದಂಧೆ ನಡೆಯುತ್ತದೆ..
ಇಂಥ ಬೆಟ್ಟಿಂಗ್ ದಂಧೆಗೆ ಸಿಲುಕಿ ಯುವಕರು ಗುಟ್ಕಾ , ಪಾನ್ ಮಸಾಲ , ಮಧ್ಯದ ಅಮಲಲ್ಲಿ ತೇಲುತ್ತಿದ್ದಾರೆ..
ಗೆದ್ದರೆ ಸಂತೋಷಕ್ಕೆ ಸೋತರೆ ದುಃಖಕ್ಕೆ ಒಟ್ಟಿನಲ್ಲಿ ಯಾವುದಾದರೂ ಒಂದು ಕಾರಣಕ್ಕೆ ನಶೆಯಲ್ಲಿ ಮುಳುಗುತ್ತಿದ್ದಾರೆ..! ಕಾಸು
ಖಾಲಿಯಾದಾಗ
ಚಿನ್ನ ,ಬೆಳ್ಳಿ ಆಭರಣ ವಾಚ್ , ಮೊಬೈಲ್ , ಬೈಕ್ ಅಡಮಾನಕ್ಕಿಟ್ಟು ಹಣ ಪಡೆದು ಬೆಟ್ಟಿಂಗ್ ವ್ಯವಹಾರಕ್ಕೆ ಮುಂದಾಗುತ್ತಿದ್ದಾರೆ..
ಇನ್ನು ಕೆಲವು ಕಡೆ ಯುವಕರು ಬೆಟ್ಟಿಂಗ್ ಗಾಗಿ ಸಾಲ ಮಾಡಿ ತೀರಿಸಲಾಗದೆ ಕೆಲವರು ಊರು ಬಿಟ್ಟರೆ ಇನ್ನು ಅಲ್ಲೊಬ್ಬರು ಇಲ್ಲೊಬ್ಬರು ಆತ್ಮಹತ್ಯೆ ದಾರಿಯನ್ನು ತುಳಿದಿದ್ದಾರೆ.. ವಿಷಾದವೆಂದರೆ ಇಂಥ ಪ್ರಕರಣಗಳು ಬೆಳಕಿಗೆ ಬಾರದೆ ಸತ್ಯಾಂಶ ಮರೆಮಾಚುವ ಘಟನೆಗಳು ನಡೆಯುತ್ತಿವೆ..!
ಇಂದಿನ ಆಧುನಿಕ ಯುಗದಲ್ಲಿ ಯುವಪೀಳಿಗೆಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ..
ಯುವ ಸಮೂಹ ನಮ್ಮ ದೇಶದ ಆಸ್ತಿಯಾಗಿದ್ದು ಅವರನ್ನು ಉಳಿಸಿ-ಬೆಳೆಸುವ ಅಗತ್ಯವಿದೆ..
ಉತ್ತಮ ಸುಸಂಸ್ಕೃತರಾಗಿ ಇಂದಿನ ಯುವಕರು ಬಾಳಬೇಕು ವಿನಹ ವಿಕೃತರಾಗಿ ಬಾಳಬಾರದು.. ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಂಸ್ಕೃತಿ ನಮ್ಮ ಆಡಳಿತಕ್ಕೆ ಬರಬೇಕಾಗಿದೆ..
ಸಮಾಜದಲ್ಲಿ ಒಳ್ಳೆಯದು-ಕೆಟ್ಟದ್ದು ಎರಡು ಇರುತ್ತದೆ ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ಈ ದೇಶದ ಆಡಳಿತವು ಹೇಳಬಹುದು ..
ಆದರೆ ಈ ವ್ಯವಸ್ಥೆ ಜನರ ದುರಾಸೆಯ ಪ್ರವೃತ್ತಿ ಲಾಭದ ಮನೋಭಾವದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಂಧಪತನದ ಹಾದಿಯನ್ನು ಗುರುತಿಸಬೇಕು.. ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ …

-ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…