
ಮಂಗಳೂರು :ಮೇ 6 : ನಾವು ವಿಶ್ವ ಸೌಹಾರ್ದ ಪ್ರಿಯರು ಎಂಬ ಘೋಷ ವಾಕ್ಯ ಸರಣಿ ಕಾರ್ಯಕ್ರಮದ ಅಂಗವಾಗಿ 31ನೇ ಅಂತರಾಷ್ಟ್ರೀಯ ವಿಹಾರ ನೌಕೆ ಜಾನಪದ ಸಂಭ್ರಮ ಕಾರ್ಯಕ್ರಮವು ಚಲಿಸುವ ಅಬ್ಬಕ್ಕ ನೌಕೆಯಲ್ಲಿ ನಗರದ ಬೊಕ್ಕಪಟ್ಣ ಸಮೀಪ ಜರುಗಿತು. ಕಾರ್ಯಕ್ರಮವನ್ನು ಮಂಜುನಾಥ್ ಎಜುಕೇಷ್ಯನ್ ಟ್ರಸ್ಟ್ ರಿ. ಮಂಗಳೂರು ಮತ್ತು ಸ್ವಾಮಿ ಎಂಟರ್ಪ್ರೈಸಸ್ ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದು ಸಮಾರಂಭವನ್ನು ಕರ್ನಾಟಕ ಸರಕಾರದ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ವ್ಯಕ್ತಿ ಪ್ರಸಿದ್ಧಿ ಪಡೆಯಲು ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ ಗೊಂದಲ ಸೃಷ್ಠಿಸುವುದರಿಂದ ಸಾಧ್ಯವಿಲ್ಲ. ಇಡೀ ಮಾನವ ಕುಲಕ್ಕೆ ಒಳಿತನ್ನು ಮಾಡುವ ಸಾಧನೆಯಿಂದ ಮಾತ್ರ ಸಾಧ್ಯ. ಅದರಲ್ಲೂ ಸೌಹಾರ್ದತೆ ಮೂಡಿಸುವ ಪ್ರಯತ್ನ ಇಂದು ಅತ್ಯಗತ್ಯ ಎಂದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಆಫ್ ಕೌನ್ಸಿಲ್(ರಿ.) ಅಧ್ಯಕ್ಷರಾದ ಕೆ.ಪಿ. ಮಂಜುನಾಥ್ ಸಾಗರ್ ಮಾತನಾಡಿ “ಹದಿನಾಲ್ಕು ವರ್ಷಗಳಿಂದ ಈ ಕಿರು ಆಂದೋಲವನ್ನು ದೇಶ ವಿದೇಶಗಳಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದೇನೆ. ನಮಗೆ ಎಲ್ಲಾ ಕಡೆ ಅತ್ಯುತ್ತಮ ಸ್ಪಂದನೆ ಸಿಗುತ್ತಿರುವುದು ಮತ್ತಷ್ಟು ಹುರಿದುಂಬಿಸಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ಅವರು ಪುಸ್ತಕ ಪ್ರೀತಿ ಮನಸ್ಸಿಗೆ ಸಾಂತ್ವನ ನೀಡುತ್ತದೆ ಮತ್ತು ಶಾಂತವಾಗಿಡುತ್ತದೆ . ಆದರೆ ಇಂದಿನ ಯುವ ಪೀಳಿಗೆ ಓದುವ ಹವ್ಯಾಸದಿಂದ ದೂರವಾಗುತ್ತಿರುವುದು ತುಂಬಾ ವಿಪರ್ಯಾಸ ಎಂದರು.
ಗೌರವ ಅತಿಥಿಗಳಾದ ಮಂಗಳೂರು ಕಮರ್ಷಿಯಲ್ ಡಿ.ಸಿ. ಶ್ರೀ ಹೆಚ್ ಹೊಳೆಯಪ್ಪ “ಜಾನಪದ ಕಲೆಗಳು ಬದುಕಿನ ಸಹಜ ಬಣ್ಣನೆಗಳು. ಈ ಕಲೆಗಳಲ್ಲಿ ಯಾವುದೇ ತಲಕುಬಳುಕಿಲ್ಲ. ತಲೆಮಾರಿನಿಂದ ತಲೆಮಾರಿಗೆ ಮೌಕಿಕವಾಗಿ ಮುಂದುವರಿದುಕೊಂಡು ಬರುತ್ತಿರುವ ಜಾನಪದ ಕಲೆಗಳನ್ನು ಟಿವಿ ಮತ್ತು ಮೊಬೈಲ್ ಹಾವಳಿಯಿಂದ ಉಳಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ” ಎಂದರು.
ಬೆಂಗಳೂರಿನ ಸ್ವಾಮಿ ಎಂಟರ್ಪ್ರೈಸಸ್ ಮುಖ್ಯಸ್ಥ ಜಾನಪದ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಸರಕಾರ ಸೂಕ್ತ ಯೋಜನೆಗಳ ಮೂಲಕ ಇದನ್ನು ಸರಿಪಡಿಸುವ ದೊಡ್ಡ ಪ್ರಮಾಣದ ಪ್ರಯತ್ನ ಮಾಡಬೇಕು ಎಂದರು.
ಮುಂಬೈಯ ರಿಸರ್ವ್ ಬ್ಯಾಂಕ್ ನಿವೃತ್ತ ಅಧಿಕಾರಿ ಡಾ. ಪ್ರಭಾ ಸುವರ್ಣ ಅವರು ಅಂತರಾಷ್ಟ್ರೀಯ “ಸಾಂಸ್ಕೃತಿ ಸೌರಭ ಪರಿಷತ್ತ್ (ಇಂ) ಜಾಗತಿಕ ಸೌಹಾರ್ದತೆಯ ಆಶಯ ಫಲಪ್ರದಾವಾಗಲಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ, ಉಷಾ ಸುನಿಲ್, ನಾರಾಯಣ ಕುಲಕರ್ಣಿ ಬೆಂಗಳೂರು, ಮೈಲಾರಿ ಚಿಕ್ಕಣವರ ಧಾರವಾಡ, ಶ್ರೀನಿವಾಸ್ ಮತ್ತು ಮುತ್ತೇಶ್ ಇವರು ಜಾನಪದ ಗೀತೆ ಮತ್ತು ಭಾವಗೀತೆಗಳನ್ನು ಹಾಡಿದರು.
ಕಾರವಾರದ ಕಲ್ಪನಾ ರಶ್ಮಿ ಕಲಾಲೋಕ ಇದರ ಗುರು ಸೂರ್ಯಪ್ರಕಾಶ್ ನಿರ್ದೇಶನದಲ್ಲಿ “ಕೃಷ್ಣಾವತಾರ” ಮತ್ತು ಆರ್ಯ ಯುವ ಸಂಘ ಇದರ ಗುರು ಶ್ರೀಮತಿ ಪೂರ್ಣಿಮಾ ಇವರ ನಿರ್ದೇಶನದಲ್ಲಿ “ಶಿವಪುರಾಣ” ನೃತ್ಯ ರೂಪಕಗಳು ಜರಗಿದವು.
ಮಂಗಳೂರು ಮ್ಯಾಜಿಕ್ ಗ್ರೂಫ್ k2S ಇವರಿಂದ ರಸಮಂಜರಿ ನಡೆಯಿತು. ಮಂಜುನಾಥ್ ಪ್ರಾರ್ಥಿಸಿದರು. ರವಿ ಎಂ. ಕುಲಶೇಖರ ಮತ್ತು ವಿದಾತ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಮಂಜುನಾಥ್ ಸಾಗರ್…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305..