
ಕೊಲ್ಲೂರು ಮೂಕಾಂಬಿಕೆ ಸನ್ನಿಧಾನಕ್ಕೆ ಈಶ್ವರಪ್ಪನವರು ಕುಟುಂಬ ಸಮೇತರಾಗಿ ಹೋಗಿದ್ದು. ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ. ಇತ್ತ ಕಡೆ ಮಹತ್ವದ ಬೆಳವಣಿಗೆ ಒಂದರಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಮೃತ ಸಂತೋಷ್ ಪ್ರಕಣವನ್ನು ತನಿಖೆ ನಡೆಸಿ ಉಡುಪಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಂತೋಷ್ ಕುಟುಂಬಸ್ಥರು ತಕರಾರು ಅರ್ಜಿ ಸಲ್ಲಿಸಿ ಮತ್ತೊಮ್ಮೆ ಈಶ್ವರಪ್ಪನವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎನ್ನಬಹುದು.
ಉಡುಪಿ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ವಿರುದ್ಧ ನ್ಯಾಯಾಲಯದ ಮರೆಹೋದ ಸಂತೋಷ್ ಕುಟುಂಬ :
ಉಡುಪಿ ಪೊಲೀಸರು ನಡೆಸಿದ ತನಿಖೆ ನ್ಯಾಯಯುತವಾಗಿಲ್ಲ. ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದಾರೆ. ಪಾರದರ್ಶಕ ತನಿಖೆಗಾಗಿ ಸಿಬಿಐ ಒಪ್ಪಿಸಬೇಕೆಂದು ಕೋರಿ ಮೃತ ಸಂತೋಷ್ ಸಹೋದರ ಪ್ರಶಾಂತ್ ನ್ಯಾಯಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್, ಸಂತೋಷ್ ಆತ್ಮಹತ್ಯೆ ಹಿಂದೆ ಹಲವರ ಕೈವಾಡವಿದೆ ನ್ಯಾಯಯುತವಾದ ತನಿಖೆ ಆಗಿಲ್ಲ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ನ್ಯಾಯಾಲಯದ ಮರೆಹೋಗಿದ್ದಾರೆ…
ಪೊಲೀಸರ ತನಿಖೆ ವಿರುದ್ಧ ನ್ಯಾಯಾಲಯದ ಹೋರಾಟ ನಡೆಸುತ್ತೇವೆ ಎಂದ ಸಂತೋಷ್ ಕುಟುಂಬ :
ಉಡುಪಿ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಹಾದಿ ತಪ್ಪಿಸಿದ್ದಾರೆ. ತನಿಖೆಯಲ್ಲಿ ಹಲವು ಪ್ರಭಾವಗಳು ಇವೆ. ಹೀಗಾಗಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದೇನೆ ಎಂದಿದ್ದಾರೆ. ಗುತ್ತಿಗೆದಾರ ಸಂತೋಷ್ ಸರ್ಕಾರ ನೀಡಬೇಕಿದ್ದ ಬಿಲ್ ಮಂಜೂರು ಮಾಡಲು ಆಗಿನ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಶೇ.40ರಷ್ಟು ಕಮೀಷನ್ ಕೇಳಿದ್ದರು ಎಂದು ಆರೋಪಿಸಿದ್ದರು. ಈ ಸಂಬಂಧ ಪ್ರಧಾನಿ ನರೇಂದ್ರಮೋದಿ, ರಾಜ್ಯಪಾಲರಿಗೂ ದೂರು ನೀಡಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾದ 40% ವಿಚಾರ :
ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ಏಪ್ರಿಲ್ನಲ್ಲಿ ಉಡುಪಿ ಲಾಡ್ಜ್ವೊಂದರಲ್ಲಿ ಈಶ್ವರಪ್ಪ ಹೆಸರು ಬರೆದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಎಸ್ಪಿ ವಿಷ್ಣುವರ್ಧನ್ ನೇತೃತ್ವದ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಈಗ ತನಿಖೆ ಸರಿಯಾಗಿ ನಡೆಸದೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಸಂತೋಷ್ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ…
ಮತ್ತೊಮ್ಮೆ ಸಂಕಷ್ಟದಲ್ಲಿ ಮಾಜಿ ಸಚಿವ ಈಶ್ವರಪ್ಪ :
ಸಂತೋಷ್ ಕುಟುಂಬದವರು ತನಿಖೆ ಸರಿಯಾಗಿ ಆಗಿಲ್ಲ ಇದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ನ್ಯಾಯಾಲಯದ ಮರೆಹೋಗಿರುವುದರಿಂದ ಮಾಜಿ ಸಚಿವ ಈಶ್ವರಪ್ಪ ನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ….
ರಘುರಾಜ್ ಹೆಚ್.ಕೆ…9449553305….