
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು ಶಾಲೆಗೆ ತೀರ್ಥಹಳ್ಳಿ ತಾಲ್ಲೂಕು ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಯ ಗರಿ ಲಭಿಸಿದೆ..
ಹೊನ್ನೇತಾಳು ಶಾಲೆ ಆರಂಭವಾದ ಹಿನ್ನೆಲೆ :
ಮಲೆನಾಡಿನ ಆಗುಂಬೆ ಭಾಗದ ಮಳೆನಾಡಿನ, ಹಳ್ಳಿಗಾಡಿನ ಮಕ್ಕಳ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ಸಲುವಾಗಿ 1954-55 ರಲ್ಲಿ ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳ ಉದಾರ ಮನಸ್ಸಿನಿಂದ ಸ್ಥಾಪನೆಯಾದ ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಒಡಲಿನಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ ಅವರ ಜೀವನ ರೂಪಿಸಿಕೊಳ್ಳಲು ಈ ಶಾಲೆ ಕಾರಣವಾಗಿತ್ತು. ಇಲ್ಲಿ ಓದಿ ಬೆಳೆದ ವಿದ್ಯಾರ್ಥಿಗಳು ಸರ್ಕಾರಿ, ಮಾಧ್ಯಮ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿರುವ ಸರ್ಕಾರಿ ಶಾಲೆ:
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಶೈಕ್ಷಣಿಕ ದಾಖಲಾತಿ ಕುಂಟುತ್ತಾ ಬಂದಿದ್ದು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಈ ಶಾಲೆಯ ಹಿನ್ನೆಡೆಯಿಂದ ಈ ಭಾಗದ ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಕುತ್ತು ಬರುವ ಸಂದರ್ಭ ಎದುರಾಗಿತ್ತು.ಇಂತಹ ಸಮಯದಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಊರಿನ ಗ್ರಾಮಸ್ಥರು, ಊರಿನ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಈ ಶಾಲೆಯ ಉಳಿವಿಗಾಗಿ ಮತ್ತು ಈ ಭಾಗದ ಹಳ್ಳಿಮಕ್ಕಳ ಶಿಕ್ಷಣಕ್ಕೆ ಆಸರೆಯಾಗಲು ಕಳೆದ ಏಳು ವರ್ಷದಿಂದ ಸತತ ಪ್ರಯತ್ನದ ಫಲವಾಗಿ ಹಲವಾರು ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ದಾನಿಗಳ ಸಹಕಾರದಿಂದ ಶಾಲೆ ಇಷ್ಟು ಎತ್ತರಕ್ಕೆ ಬೆಳೆದಿದೆ.
ಗೃಹ ಸಚಿವರು ಕ್ಷೇತ್ರದ ಶಾಸಕರಿಂದ ಮಹತ್ತರ ಕೊಡುಗೆಗಳು : ಹಲವು ದಾನಿಗಳು ನೀಡಿದ ಕೊಡುಗೆಯ ಪರಿಣಾಮ ಶಾಲೆ ಈ ಮಟ್ಟಕ್ಕೆ ಬೆಳೆದು ನಿಂತಿದೆ :
ಗೃಹಸಚಿವರಾದ ಆರಗ ಜ್ಞಾನೇಂದ್ರರವರು ಶಾಲಾ ಕೊಠಡಿ ದುರಸ್ತಿ ಅನುದಾನ, ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ವೀಣಾ ಗಿರೀಶ್ ಇವರು ನೀಡಿದ ಅನುದಾನದಿಂದ ಶಾಲೆ ಸುಂದರವಾಗಿ ನಿರ್ಮಾಣವಾಗಿದೆ. ಇದೇ ಸಮಯದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಪುನರ್ನಿರ್ಮಾಣದಂತಹ ಮಹತ್ಕಾರ್ಯ ಮಾಡುತ್ತಿರುವ ಬೆಂಗಳೂರಿನ ಕೇರ್ ವರ್ಕ್ಸ್ ಫೌಂಡೇಷನ್ ನ ಸಹಕಾರ ಈ ಶಾಲೆಗೆ ದೊರೆತಿದ್ದು ಮಾತ್ರವಲ್ಲದೆ ಹಳ್ಳಿ ಮಕ್ಕಳ ಶಿಕ್ಷಣದ ಪಾಲಿನ ಅಕ್ಷಯ ಪಾತ್ರೆಯಾಗಿ ಬಂದು ಈ ಶಾಲೆಯನ್ನು ಅಭಿವೃದ್ದಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಶ್ರೀ ಜಯ ಚಾರಿಟೇಬಲ್ ಟ್ರಸ್ಟ್ ಶೃಂಗೇರಿ, ಮುಖ್ಯಸ್ಥರಾದ ಶ್ರೀ ಸಂಪತ್ ಕುಮಾರ್ ಅವರು ಶಾಲೆಯ ರಂಗಮಂದಿರ ನಿರ್ಮಾಣ ಮಾಡುವಲ್ಲಿ ಪ್ರಮುಖ ಸಹಕಾರ ನೀಡಿರುತ್ತರೆ. ಶ್ರೀ ಮಧು ನರಸಿಂಹ, ಬೆಂಗಳೂರು ಇವರು ಪ್ರಥಮವಾಗಿ ಶಾಲೆಯ ಕನಸಿನ LKG, UKG ಗೆ ಎಲ್ಲಾ ರೀತಿಯ ಸಂಪೂರ್ಣ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ. ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಠದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿಭಟ್ಟಾರಕ ಜಗದ್ಗುರುಗಳು ಈ ಶಾಲೆಗೆ ಸಹಕಾರವನ್ನು ನೀಡಿರುತ್ತಾರೆ. ಶ್ರೀಮತಿ ಚೇತನ ಟೀಕಪ್ಪಗೌಡ ಮನ್ಸಗಾರ್ ಇವರು ತಮ್ಮ ಮದುವೆಯನ್ನು ಸರಳವಾಗಿ ಆಚರಿಸಿಕೊಂಡು ಆ ಹಣವನ್ನು ಶಾಲೆಗೆ ದೇಣಿಗೆಯನ್ನು ನೀಡಿರುವುದನ್ನು ಈ ಸಮಯದಲ್ಲಿ ನೆನಪು ಮಾಡಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದಿಂದ ಸಹಕಾರ ನೀಡಿರುತ್ತಾರೆ. ಗ್ರಾಮೀಣ ಭಾಗದ ಈ ಶಾಲೆಯ ಸಮಗ್ರ ಸುಧಾರಣೆಯಲ್ಲಿ ಇವರೆಲ್ಲರ ಪಾತ್ರ ಮರೆಯಲಾಗದು.
ಶಾಲೆಯಲ್ಲಿ ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳು :
ಆಧುನಿಕತೆಯೊಂದಿಗೆ ಈ ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆಯಾಗಿ ಯೋಗ ತರಬೇತಿ ಶಿಬಿರ, ಕಂಪ್ಯೂಟರ್ ಶಿಕ್ಷಣ, ಸ್ಪೋಕನ್ ಇಂಗ್ಲೀಷ್ ತರಬೇತಿ ಶಿಬಿರ , ಸ್ಮಾರ್ಟ್ ಕ್ಲಾಸ್ ತರಬೇತಿ ,ಅಕ್ಷರ ಫೌಂಡೇಶನ್ ಬೆಂಗಳೂರು ಇವರಿಂದ ಪ್ರತಿದಿನ ಸ್ಪೋಕನ್ ಇಂಗ್ಲೀಷ್ ಶಿಕ್ಷಣ, ಭಗವದ್ಗೀತಾ ಪಠಣ ತರಗತಿ ,ಭರತನಾಟ್ಯ ತರಗತಿ, ಆನ್ಲೈನ್ ಸ್ಪೋಕನ್ ಇಂಗ್ಲೀಷ್ ತರಗತಿ, ಕೇರ್ ವರ್ಕ್ ಫೌಂಡೇಶನ್ ಬೆಂಗಳೂರು ಇವರಿಂದ ಜೀವನ ಕೌಶಲ ಶಿಬಿರ ಹಾಗೂ ಆರೋಗ್ಯ ಶಿಬಿರ, ನೈತಿಕ ಶಿಕ್ಷಣ ದೃಷ್ಟಿಯಿಂದ ಬೀಜದುಂಡೆ ಕಾರ್ಯಕ್ರಮ, ಕಾಳಿಂಗ ಫೌಂಡೇಶನ್ ಗುಡ್ಡೇಕೇರಿ, ಕಾಳಿಂಗ ಮನೆ ಇವರಿಂದ ಸ್ಪೋಕನ್ ಇಂಗ್ಲೀಷ್ ಶಿಬಿರ ಹಾಗೂ ಬಟರ್ಫ್ಲೈ ಗಾರ್ಡನ್ ಕಾರ್ಯಕ್ರಮ, ಯುವಕರಿಂದ ರಕ್ತದಾನ ಶಿಬಿರ ಹೀಗೆ ಪ್ರತಿ 6 ತಿಂಗಳಿಗೆ ಸ್ಥಳೀಯ ಪ್ರದೇಶದ ಸ್ವಚ್ಛತಾ ಅಭಿಯಾನ ಹಾಗೂ ಶ್ರಮದಾನ ಮಾಡುವುದರ ಮೂಲಕ ವಿದ್ಯಾರ್ಥಿಗಳನ್ನು ಸಮಗ್ರವಾಗಿ ಏಳಿಯನ್ನು ಮಾಡುವ ಚಿಂತನೆಯನ್ನು ಅಳವಡಿಸಿಕೊಂಡಿದೆ.
ಶಾಲೆಯ ಅಭಿವೃದ್ಧಿಯಲ್ಲಿ ಸ್ಥಳೀಯರ ಎಸ್ ಡಿ ಎಂ ಸಿ ಸದಸ್ಯರ, ಶಿಕ್ಷಕರ, ಪೋಷಕರ, ಮಹತ್ವದ ಪಾತ್ರ :
ಈ ಶಾಲೆಯನ್ನು ಉಳಿಸಿಕೊಂಡು ಹೋಗುವಲ್ಲಿ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಮಲೆನಾಡಿನ ಹೆಮ್ಮೆಯ ಕಲೆಯಾದ ಅಂಟಿಕೆ-ಪಂಟಿಗೆ ಕಾರ್ಯಕ್ರಮ ಹಾಗೂ ಕರೋನ ಮಹಾಮಾರಿ ಸಂದರ್ಭದಲ್ಲಿ ಶಾಲೆ SDMC ಹಾಗು ಶಾಲಾ ಪೋಷಕರಿಂದ ಹತ್ತು ಸಾವಿರ ಮಾಸ್ಕ್ CWF ಬೆಂಗಳೂರು ಮಾರ್ಗದರ್ಶನದಲ್ಲಿ ತಯಾರಿಸಿದ್ದು ಸಮಾಜಮುಖಿ ಚಿಂತನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. 1954 ರಿಂದ 2022 ರ ವರೆಗಿನ ಶಾಲೆಯ ಶಿಕ್ಷಕರುಗಳು , ಗ್ರಾಮ ಪಂಚಾಯತಿ ಹೊನ್ನೇತಾಳು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, SDMC ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸಮಸ್ತ ಗ್ರಾಮಸ್ಥರು, ಪೋಷಕರ ವರ್ಗದ ಸಹಕಾರದಿಂದ ಅಮೃತ ಮಹೋತ್ಸವ ಸಂಭ್ರಮದ ಆಚರಣೆಯ ಸುಸಂದರ್ಭದಲ್ಲಿ ಈ ಸರ್ಕಾರಿ ಶಾಲೆಯ ಹಿರಿಮೆಯನ್ನು ಮೇಲಕ್ಕೆ ಎತ್ತಿ ನಿಲ್ಲಿಸುವಲ್ಲಿ ಕಾರಣರಾಗಿದ್ದಾರೆ. ಶಾಲೆ ಸಮಗ್ರ ಬೆಳವಣಿಗೆ,ಇಲ್ಲಿನ ಮಕ್ಕಳಿಗೆ ಸಿಗುತ್ತಿರುವ ಮೌಲ್ಯಯುತ ಹಾಗೂ ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಪರಿಸರದ ಕಾರಣದಿಂದಾಗಿ ತೀರ್ಥಹಳ್ಳಿ ತಾಲ್ಲೂಕಿನ ಅತ್ಯುತ್ತಮ ಹಿರಿಯ ಪ್ರಾಥಮಿಕ ಶಾಲೆ ಎಂಬ ಕೀರ್ತಿಗೆ ಕಾರಣವಾಗುವ ಮೂಲಕ ಈ ಶಾಲೆಯ ಗರಿಮೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಈ ದಿನ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರರವರು ಶಾಲೆಗೆ ತೀರ್ಥಹಳ್ಳಿ ತಾಲ್ಲೂಕಿನ ಉತ್ತಮ ಹಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿ ನೀಡುವ ಮೂಲಕ ಅಭಿನಂದಿಸಿದ್ದಾರೆ. ಸಮಗ್ರ ಅಭಿವೃದ್ಧಿಯಲ್ಲಿ ಮಾರ್ಗದರ್ಶನ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆನಂದ ಕುಮಾರ್ ಎ, ಶಿಕ್ಷಣ ಸಂಯೋಜಕರಾದ ಶ್ರೀ ಗಣೇಶ್, ಸಿ.ಆರ್.ಪಿ ಶ್ರೀಮತಿ ಕಲಾವತಿ ಇವರಿಗೆ ಹಾಗೂ ಸಮಗ್ರವಾಗಿ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಮಹಾನೀಯರಿಗೂ ಶಾಲಾ ಬಳಗದ ಪರವಾಗಿ ಎಸ್ ಡಿ ಎಂ ಸಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.. .
ರಘುರಾಜ್ ಹೆಚ್.ಕೆ…9449553305…