
ರಕ್ತ ದಾನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುವುದು ಸುಲಭವಲ್ಲ. ಅಂತಹುದರಲ್ಲೂ ಸರ್ಕಾರಿ ನೌಕರರು,ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಳೆದ ಕೆಲವಾರು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆರಡು ಬಾರಿ ರಕ್ತದಾನ ಶಿಬಿರವನ್ನು ಸಂಘಟಿಸುವ ಮೂಲಕ ರಕ್ತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಮಾಜಮುಖಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಮಧುಕರ್ ಎಸ್ ವಿ ನುಡಿದರು. ಅವರು 76 ನೇ ಸ್ವಾತಂತ್ರೋತ್ಸವದ ಸಂಭ್ರಮದ ಪ್ರಯುಕ್ತ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡಿ ಇತರೆ ರಕ್ತದಾನಿಗಳಿಗೆ ಪ್ರಶಂಸಾ ಪತ್ರ ವಿತರಿಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ರಕ್ತ ದಾನದ ಬಗ್ಗೆ ಇರುವ ಹಿಂಜರಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು ನಮ್ಮದೊಂದು ಪುಟ್ಟ ಪ್ರಯತ್ನ. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣ ರಾಜ್ಯೋತ್ಸವ ಸಂದರ್ಭಗಳಲ್ಲಿ ನಡೆಸಲಾಗುವ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದ ಸಂಘದ ಅಧ್ಯಕ್ಷ ಟಿ ವಿ ಸತೀಶ ಇದು ನಮ್ಮ ಸಂಘಟನೆಯ ನಿರಂತರ ಹನ್ನೊಂದನೆ ಶಿಬಿರವಾಗಿದ್ದು ಪ್ರತಿ ವರ್ಷ ಹೊಸ ಹೊಸ ರಕ್ತ ದಾನಿಗಳು ಸೇರ್ಪಡೆಗೊಳ್ಳುತ್ತಿರುವುದರಿಂದ ನಮ್ಮ ಮುಖ್ಯ ಉದ್ದೇಶ ಈಡೇರುತ್ತಿರುವುದು ಸಂತಸ ತಂದಿದೆ. ಈ ವರ್ಷ ಅತೀ ಹೆಚ್ಚು ಪ್ರಮಾಣದಲ್ಲಿ ಏಳು ಜನ ಪ್ರಥಮ ಬಾರಿಗೆ ರಕ್ತದಾನ ಮಾಡಿದ್ದಾರೆ. ಒಮ್ಮೆ ರಕ್ತದಾನ ಮಾಡಿದವರು ಅಗತ್ಯವಿದ್ದಾಗ ರಕ್ತದಾನ ಮಾಡಲು ಮುಂದೆ ಬರುತ್ತಾರೆ. ನಮ್ಮ ಶಿಬಿರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ರಕ್ತದಾನಿಗಳಾಗಿದ್ದಾರೆ. ಇದು ನಿಜಕ್ಕೂ ನಮಗೆ ಸಾರ್ಥಕತೆ ತಂದಿದೆ.ಇಂದೇ ರಕ್ತದಾನ ಮಾಡಬೇಕೆಂದೇನೂ ಇಲ್ಲ. ದಾನಿಗಳು ತಮಗೆ ಅನುಕೂಲವಾದ ದಿನ ಅನುಕೂಲ ಸಮಯಕ್ಕೆ ರಕ್ತದಾನ ಮಾಡಬಹುದು.ಒಟ್ಟಿನಲ್ಲಿ ರಕ್ತದಾನ ಮಾಡುವುದು ಮುಖ್ಯ. ನಮ್ಮ ಈ ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಸಂಘದ ಉಪಾಧ್ಯಕ್ಷರುಗಳಾದ ರಾಘವೇಂದ್ರ ಎಸ್ ನೇತೃತ್ವದ ಆರ್ ಡಿ ಪಿ ಆರ್ ತಂಡ, ಎಲ್ಲಪ್ಪ ವಡ್ಡರ್ ನೇತೃತ್ವದ ಅರಣ್ಯ ಇಲಾಖಾ ತಂಡ, ಜಂಟಿ ಕಾರ್ಯದರ್ಶಿ ಕೌಶಿಕ್ ಮತ್ತು ಕೃಷಿ ಇಲಾಖಾ ಉಪ ನಿರ್ದೇಶಕ ಪ್ರವೀಣ್ ನೇತೃತ್ವದ ಕೃಷಿ ಇಲಾಖಾ ತಂಡ, ಡಾ.ಅನಿಕೇತನ್ ನೇತೃತ್ವದ ಆರೋಗ್ಯ ಇಲಾಖಾ ತಂಡ.ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್,ಶಿರಸ್ತೆದಾರ್ ಕಟ್ಟೆ ಮಂಜುನಾಥ್, ಕಂದಾಯ ನಿರೀಕ್ಷಕ ಸೂರತ್ ಕುಮಾರ್, ಉಪನ್ಯಾಸಕ ನಾಗಭೂಷಣ, ಪ್ರೌಢಶಾಲಾ ಶಿಕ್ಷಕ ಕೇಶವ, ಯುವ ಮುಖಂಡ ಕಾರ್ತಿಕ್, ವಿಧ್ಯಾರ್ಥಿ ನಚಿಕೇತ್ ಶೆಟ್ಟಿ, ರೋಟರಿಯನ್ ಶಾಂತಕುಮಾರ್, ಕೃಷಿಕ ವಿಶ್ವಾಸ್ ಶೆಣೈ, ಸತೀಶ ಜಿಗಳಗೋಡು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು , ವಿವಿಧ ಸಮಾಜಮುಖಿ ಕಾಳಜಿಯ ಯುವಕರು,ಸಾರ್ವಜನಿಕರು ರಕ್ತದಾನ ಮಾಡಿದರು.
ಕಾರ್ಯದರ್ಶಿ ರಾಮು ಬಿ, ಖಜಾಂಚಿ ಹೆಚ್ ಸಿ ಪವಿತ್ರ, ಮಾಜಿ ಗೌರವಾಧ್ಯಕ್ಷ ಆರ್ ಎಂ ಧರ್ಮಕುಮಾರ್ ಮತ್ತಿತರರರು ಇದ್ದರು..