
ತೀರ್ಥಹಳ್ಳಿ:7ನೇ ವೇತನ ಆಯೋಗದ ಶಿಫಾರಸ್ಸುಗಳ ಯಥಾವತ್ ಜಾರಿ. NPS ರದ್ದು ಪಡಿಸಿ OPS ಮರು ಜಾರಿ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಸರ್ಕಾರವನ್ನು ಕೋರುವ ನಿಟ್ಟಿನಲ್ಲಿ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಸರ್ಕಾರ ನೇಮಿಸಿದ ವೇತನ ಆಯೋಗದ ವರದಿಯನ್ನು ಪಡೆಯಲು ಸರ್ಕಾರವೇ ಎರಡು ಬಾರಿ ಕಾಲಾವಕಾಶವನ್ನು ವಿಸ್ತರಣೆ ಮಾಡಿದ್ದಲ್ಲದೆ. ವರದಿಯನ್ನು ಪಡೆದ ನಂತರವೂ ಅದನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮವಹಿಸುತ್ತಿಲ್ಲ, ವೇತನ ಆಯೋಗ ನೇಮಕ ಮಾಡಿ ಈಗಾಗಲೇ ಹತ್ತೊಂಬತ್ತು ತಿಂಗಳು ಕಳೆದಿದ್ದರೂ ಅದರ ಪ್ರಯೋಜನವಿನ್ನೂ ದೊರಕದೆ ನೌಕರರು ಹತಾಶರಾಗುತಿದ್ದಾರೆ.
ಸರ್ಕಾರವೇ ನೀಡಿದ ವಾಗ್ದಾನದಂತೆ ಕೂಡಲೇ ವೇತನ ಆಯೋಗದ ಅನುಷ್ಟಾನ, ಓಪಿಎಸ್ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಕೂಡಲೇ ಜಾರಿಗೊಳಿಸುವಂತೆ ಸಂಘ ಒತ್ತಾಯಿಸುತ್ತದೆ.
ಶಾಸಕರು ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಸಂಘದ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಸಹಕರಿಸುವಂತೆ ಕೋರಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನೌಕರರ ಬೇಡಿಕೆ ಸಮಂಜಸವಾಗಿದ್ದು ಈ ಹಿಂದಿನ ಸರ್ಕಾರ ಈ ಬಗ್ಗೆ ಆದೇಶಗಳನ್ನು ಮಾಡಿದ್ದರೂ ಅದು ಇಂದಿಗೂ ಅನುಷ್ಟಾನಗೊಳ್ಳದಿರುವುದು ವಿಷಾಧನೀಯ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಘದ ಕಾರ್ಯದರ್ಶಿ ರಾಮು ಬಿ, ಹಿರಿಯ ಉಪಾಧ್ಯಕ್ಷ ರಾಘವೇಂದ್ರ ಎಸ್, ಉಪಾಧ್ಯಕ್ಷರಾದ ಎಲ್ಲಪ್ಪ ಒಡ್ಡರ್,ಸುಷ್ಮಾ ಎಸ್ ಪಿ, ಸತೀಶ್ ಟಿ ಆರ್, ಶ್ರೀ ಜೆ ಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗಣೇಶ್ ಭಟ್, ಡಾ.ಗುರುರಾಜ್ , ಆಯುಷ್ ವೈದ್ಯಾಧಿಕಾರಿ ಡಾ.ರವಿಶಂಕರ್ ಉಡುಪ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರೂ ಇದ್ದರು.