ವಿಶ್ವಕರ್ಮ ಸಂಸ್ಕೃತಿ ಪರಂಪರೆಯು ಜಗತ್ತಿನ ಅತಿ ಶ್ರೀಮಂತ ಸಂಸ್ಕೃತಿಗಳಲ್ಲಿ ಒಂದಾಗಿದ್ದು, ಅದನ್ನು ಮುಂದಿನ ಪೀಳಿಗೆಯವರಿಗೆ ಸೂಕ್ತ ರೀತಿಯಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ಕರೆಕೊಟ್ಟರು.
ಬೆಂಗಳೂರಿನ ಎಚ್. ಎ. ಎಲ್. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಾಜದವರು ಆಯೋಜಿಸಿದ್ದ “ವಿಶ್ವಕರ್ಮ ಪೂಜ್ಯೋತ್ಸವ” ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ವಿತರಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಉಮೇಶ್ ಕುಮಾರ್ ಅವರುವ “ವಿಶ್ವಕರ್ಮ ಸಮಾಜದಲ್ಲಿ ಜನಿಸಿರುವುದಕ್ಕೆ ನಾವೆಲ್ಲ ಬಹಳ ಹೆಮ್ಮೆ ಪಡಬೇಕು. ಏಕೆಂದರೆ ನಮ್ಮಷ್ಟು ಕೌಶಲ್ಯ ಹೊಂದಿದ ಇನ್ನೊಂದು ಸಮುದಾಯವಿಲ್ಲ. ಹಾಗೆಯೇ ನಮ್ಮಷ್ಟು ಶ್ರಮ ಪಡುವ ಇನ್ನೊಂದು ಸಮುದಾಯವೂ ಇಲ್ಲ. ಇತರ ಎಲ್ಲ ಸಮುದಾಯಗಳಿಗಿಂತ ಹೆಚ್ಚಿನ ಕೌಶಲ್ಯವನ್ನು, ಪಂಚ ಕಸುಬುಗಳ ಮೂಲಕ ಭಗವಾನ್ ವಿಶ್ವಕರ್ಮ ದೇವರು ನಮಗೆ ದಯಪಾಲಿಸಿದ್ದಾರೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಹಾಗೂ ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಅವರಲ್ಲಿ ಸಂಸ್ಕೃತಿ-ಪರಂಪರೆಯ ಅರಿವನ್ನು ಹೆಚ್ಚು ಮಾಡಿ, ಅವರೂ ಸಹ ತಮ್ಮ ಸಮುದಾಯದ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಲಲಿತೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಪ್ರಸನ್ನ, ನರಸಿಂಹ ಖಜಾಂಚಿ ನಂಜುಂಡಸ್ವಾಮಿ ಮುಖಂಡರಾದ ಶಂಕರ್.ಜಿ ಹಾಗೂ ವಿಶೇಷ ಸಂಖ್ಯೆಯಲ್ಲಿ ಬಾಂಧವರು ಉಪಸ್ಥಿತರಿದ್ದರು.