ಸಾಕಷ್ಟು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗ ಮತ್ತು ಉದ್ಯೋಗಕ್ಕೆ ಮಾರ್ಗದರ್ಶನ ಮಾಡುತ್ತಿರುವ ಸಮಾಜಮುಖಿ ಕಾಳಜಿಯ ವ್ಯಕ್ತಿತ್ವದ, ಪ್ರಸ್ತುತ ಮೂಡಬಿದ್ರೆಯ ಪ್ರತಿಷ್ಠಿತ MITE ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೋಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತೀರ್ಥಹಳ್ಳಿಯ ಸಂತೋಷ್ ಕುಮಾರ್ ಟಿ ವಿ ಯವರು ಸಂಶೋಧನಾ ಪ್ರಬಂಧಕ್ಕಾಗಿ ಪಿ ಹೆಚ್ ಡಿ ಪದವಿ ಪಡೆದಿರುವ ಹಿನ್ನಲೆಯಲ್ಲಿ ಡಾ.ಅಂಬೇಡ್ಕರ್ ಜಯಂತಿಯಂದು ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು 60 ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಮಾಡಿದ ಭಾಷಣದ ಪ್ರತಿಯನ್ನು ನೀಡಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಅಂಬೇಡ್ಕರ್ ರವರನ್ನು ಸಾಕಷ್ಟು ಜನ ಅವರವರ ವ್ಯಾಪ್ತಿಯಲ್ಲಷ್ಟೇ ಅರ್ಥೈಸಿಕೊಂಡಿರುವ ಹೊತ್ತಿನಲ್ಲಿ ಅವರ ಧೀಮಂತ ವ್ಯಕ್ತಿತ್ವವನ್ನು ಸಮಾಜಕ್ಕೆ ಅದರಲ್ಲೂ ಮುಖ್ಯವಾಗಿ ಯುವ ಜನತೆಗೆ ಪರಿಚಯಿಸುವ ಅಗತ್ಯ ಹೆಚ್ಚಿದೆ. ಸ್ವತಃ ಅವರದ್ದೇ ಆದ ಭಾಷಣದ ಈ ಪುಟ್ಟ ಕೃತಿ ಅವರ ಬಾಲ್ಯ ಬದುಕು ಚಿಂತನೆಗಳ ಪರಿಚಯ ಮಾಡಿಸುತ್ತದೆ. ಅವರ ಸಮಗ್ರ ವ್ಯಕ್ತಿತ್ವವನ್ನು ತುಂಬ ಸರಳವಾಗಿ ಪರಿಚಯಿಸುತ್ತದೆ. ಬುದ್ದ,ಕಬೀರ ದಾಸರು ಮತ್ತು ಜ್ಯೋತಿಬಾ ಪುಲೆಯವರಿಗೆ ಗುರುವಿನ ಸ್ಥಾನ ನೀಡಿದ್ದ ಅವರು ಜ್ಞಾನ,ಆತ್ಮ ಗೌರವ ಮತ್ತು ಶೀಲ(ವ್ಯಕ್ತಿತ್ವ)ಕ್ಕೆ ದೇವತೆಗಳ ಸ್ಥಾನ ನೀಡಿದ್ದಾರೆ.
ಡಾ.ಅಂಬೇಡ್ಕರ್ ರವರು ದೇವತೆ ಎಂದು ಪರಿಗಣಿಸುವ ಜ್ಞಾನದ ಮಾರ್ಗದಲ್ಲಿ ಒಂದಿಷ್ಟು ಉತ್ತಮ ಸಾಧನೆ ಮಾಡಿರುವ ಸಂತೋಷ್ ಕುಮಾರ್ ರವರನ್ನು ಗೌರವಿಸುವುದು ಮತ್ತು ಡಾ.ಅಂಬೇಡ್ಕರ್ ರವರನ್ನು ಮತ್ತಷ್ಟು ಯುವ ಜನತೆಗೆ ಪರಿಚಯಿಸುವ ಕಾರ್ಯಕ್ಕೆ ಅವರ ಸಹಕಾರವನ್ನು ಕೋರುವ ಮೂಲಕ ಡಾ.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಪ್ರಯತ್ನ ನಮ್ಮದು. ಸಂತೋಷ್ ರವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆಗಳು ದಕ್ಕಲಿ, ಡಾ.ಅಂಬೇಡ್ಕರ್ ರವರ ವಿಚಾರ ಧಾರೆಗಳು ನಮ್ಮ ಯುವ ಜನತೆಗೆ ಪರಿಣಾಮಕಾರಿಯಾಗಿ ತಲುಪುವಂತಾಗಲಿ ಎಂಬ ಹಾರೈಕೆ ನಮ್ಮದು ಎಂದರು.
ತಾಲ್ಲೂಕು ಕನ್ಮಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ ಕೆ ರಮೇಶ್ ಶೆಟ್ಟಿ ಮಾತನಾಡಿ, ವಿದ್ಯೆಯ ಜೊತೆಗೆ ಪರೋಪಕಾರ ಮತ್ತು ಸೌಜನ್ಯದ ನಡವಳಿಕೆಗಳಿಂದ ಸಂತೋಷ್ ಪೋಷಕರಿಗೆ ಮತ್ತು ಊರಿಗೆ ಒಳ್ಳೆಯ ಹೆಸರು ತಂದಿದ್ದಾರೆ. ಡಾ.ಅಂಬೇಡ್ಕರ್ ರವರ ಜನ್ಮ ದಿನದ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತಿರುವುದು ಸಂತಸದ ವಿಚಾರ. ಡಾ.ಅಂಬೇಡ್ಕರ್ ರವರ ಭಾಷಣದ ಈ ಕೃತಿಯನ್ನು ಮತ್ತಷ್ಟು ಯುವ ಜನತೆಗೆ ತಲುಪಿಸುವ ಮೂಲಕ ಡಾ.ಅಂಬೇಡ್ಕರ್ ರವರ ಜನ್ಮ ದಿನವನ್ನು ಅರ್ಥಪೂರ್ಣವಾಗಿಸೋಣ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂತೋಷ್ ಕುಮಾರ್ ಟಿ ವಿ, ನನ್ನ ಪುಟ್ಟ ಸಾಧನೆಯನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ. ಯಾವುದೇ ಪ್ರಚಾರದ ಹಂಗಿಲ್ಲದೆ ನನ್ನ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಸಣ್ಣ ಪುಟ್ಟ ಸಮಾಜ ಮುಖಿ ಕಾರ್ಯಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ನನ್ನ ಜವಬ್ದಾರಿಯನ್ನ ಹೆಚ್ಚಿಸಿದೆ. ತಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಹಿರಿಯ ನ್ಯಾಯವಾದಿ ಟಿ ಎಲ್ ಮಂಜುನಾಥ್, ಪ ಪಂ ಸದಸ್ಯ ರಾಘವೇಂದ್ರ ಶೆಟ್ಟಿ, ಉದ್ಯಮಿ ಟಿ ಜಿ ಸೋಮಶೇಖರ್, ಯುವ ಮುಖಂಡ ಅಮರನಾಥ್ ಶೆಟ್ಟಿ ,ಗಿರಿ ಮತ್ತಿತರರಿದ್ದರು.