
ಕೋವಿಡ್ ತಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಹಲವು ಯೋಜನೆಗಳ ಜಾರಿಗೆ ಮುಂದಾಗಿದೆ. ಈಗಾಗಲೇ ನಗರದಲ್ಲಿ ಮೂರನೇ ಕೊರೋನಾದ ಮುನ್ಸೂಚನೆ ರೀತಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಕೊರೋನಾ ಕಟ್ಟಿಹಾಕಿ ಮೂರನೇ ಅಲೆಯನ್ನು ತಡೆಯುವ ಲೆಕ್ಕಾಚಾರ ಬಿಬಿಎಂಪಿಯದ್ದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಕಂದಾಯ ಸಚಿವ ಆರ್ ಅಶೋಕ್ ಸಭೆ ನಡೆಸಿ, ಹಲವು ತೀರ್ಮಾನಗಳನ್ನು ಕೈಗೊಂಡರು. ಆಗಸ್ಟ್ 15ರ ಬಳಿಕ ಹಲವು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಆರ್ ಅಶೋಕ್, ಈ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ದೇವಸ್ಥಾನಗಳಿಗೆ ಹೆಚ್ಚು ಜನ ಬರುವ ಸಾಧ್ಯತೆ ಇದೆ. ಹೀಗಾಗಿ ದೇವಸ್ಥಾನಗಳಿಗೆ ನಿರ್ಬಂಧ ಮಾಡುವ ಬಗ್ಗೆ ಹೆಚ್ಚಿನ ಗಮನ ಕೊಡಲಾಗುವುದು ಎಂದರು.
ನಿರಂತರ ಹಬ್ಬ ಬರುವುದರಿಂದ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ. ಈ ತಿಂಗಳು ಪೂರ್ತಿ ನಿಯಮ ತರುವ ಬಗ್ಗೆ ಆಡಳಿತ ಮಂಡಳಿಯ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಕೋವಿಡ್ ಹೆಚ್ಚಾಗಿ ಅಪಾರ್ಟ್ ಮೆಂಟ್ ಗಳಲ್ಲೇ ಕಂಡುಬರುತ್ತಿರುವುದರಿಂದ ಕೋವಿಡ್ ಸೋಂಕು ಕಂಡುಬರುವ ಅಪಾರ್ಟ್ ಮೆಂಟ್ ಗಳ ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿಸಲಾಗುವುದು. ಮಾರ್ಷಲ್ಸ್ ಕೂಡಾ ಭೇಟಿ ನೀಡಿ ಪರಿಶೀಲಿಸಬಹುದು. ಯಾರೂ ತಡೆಯುವಂತಿಲ್ಲ. ಜೊತೆಗೆ ಕೋವಿಡ್ ಸೋಂಕು ಕಂಡು ಬಂದ ಅಪಾರ್ಟ್ ಮೆಂಟ್ ನ ಎಲ್ಲಾರ ಆರೋಗ್ಯ ಪರಿಶೀಲಿಸಬೇಕು. ಆ ಒಂದು ಫ್ಲೋರ್ ಅನ್ನು ಸೀಲ್ ಡೌನ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ, ನಗರದ ಪ್ರತಿ ಮನೆಗೂ ಭೇಟಿ ನೀಡಲು ವೈದ್ಯಾದಿಕಾರಿಗಳ 108 ತಂಡ ಆಗಸ್ಟ್ 16 ರಿಂದ ಕೆಲಸ ಆರಂಭಿಸಲಿದೆ. ಮನೆ ಬಾಗಿಲಿಗೆ ಕಾರ್ಪೊರೇಷನ್ ವೈದ್ಯರು ಎಂಬ ಯೋಜನೆಯಡಿ, ಪ್ರತೀ ಮನೆಗೂ ಹೋಗಿ ಮನೆಯ ಎಲ್ಲಾ ಸದಸ್ಯರ ಆರೋಗ್ಯ ಪರಿಸ್ಥಿತಿಯ ಚೆಕ್ ಲಿಸ್ಟ್ ಮಾಡಿಕೊಳ್ಳಬೇಕು. ಲಸಿಕೆ ಮಾಹಿತಿಯನ್ನೂ ಪಡೆದು ಎಲ್ಲವನ್ನೂ ಮೊಬೈಲ್ ನಲ್ಲಿ ಅಪ್ಲೋಡ್ ಮಾಡುವ ಕೆಲಸ ಆರಂಭವಾಗಲಿದೆ.
ಕೋವಿಡ್ ಪಾಸಿಟಿವ್ ಎಂದು ಗೊತ್ತಾದಾರು ಗಂಟೆಯ ಒಳಗೆ ವೈದ್ಯರ ತಂಡ, ಭೇಟಿ ನೀಡಲಿದೆ. ಇದಲ್ಲದೆ ಕೋವಿಡ್ ಇದ್ದರೂ ಇರದಿದ್ದರೂ, ವೈದ್ಯರ ತಂಡ ಮನೆಮನೆ ಬಾಗಿಲಿಗೆ ಭೇಟಿ ನೀಡಲಿದೆ. ಪ್ರತೀ ಮನೆಗೂ ಒಂದು ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್ ಗಳಲ್ಲಿ ಪೈಲೆಟ್ ಯೋಜನೆ ಜಾರಿಯಾಗಲಿದೆ. ಇದರಿಂದ ನಗರದ ಜನರ ಪೂರ್ಣ ಚಿತ್ರಣ ಸಿಗಲಿದೆ. ರೋಗಿಗಳ ರಕ್ಷಣೆ, ರೋಗ ಬಾರದಂತೆ ತಡೆಗಟ್ಟಲು, ವ್ಯಾಕ್ಸಿನೇಷನ್ ಪಡೆಯಲು ಮನೆಬಾಗಿಲಿಗೆ ಕಾರ್ಪೊರೇಷನ್ ವೈದ್ಯರು ಎಂಬ ಘೋಷವಾಕ್ಯದೊಂದಿಗೆ ಈ ಕೆಲಸ ನಡೆಯಲಿದೆ.
ಸರ್ಕಾರದ ನಿರ್ದೇಶನದ ಪ್ರಕಾರ ವಾರ್ಡ್ ಗೆ ಒಬ್ಬರಂತೆ, 198 ವೈದ್ಯರನ್ನು 60 ಸಾವಿರ ಸಂಬಳದ ರೀತಿ, ವೈದ್ಯರನ್ನು ಗುತ್ತಿಗೆಗೆ ತೆಗೆದುಕೊಳ್ಳಲಿದೆ ಬಿಬಿಎಂಪಿ.
ಇನ್ನು ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಇಬ್ಬರು ವೈದ್ಯರು ಇರಲಿದ್ದಾರೆ. ಕೋವಿಡ್ ಸೋಂಕಿತರಿಗೆ ಕೊಟ್ಟ ಕಿಟ್ ನಿಂದ ಏನಾದರೂ ಅಡ್ಡ ಪರಿಣಾಮಗಳಾದರೆ, ಬೇರೆ ಮೆಡಿಸಿನ್ ಸಲಹೆ ನೀಡಲು ಪ್ರತೀ ಕ್ಷೇತ್ರದಲ್ಲಿ ಇಬ್ಬರು ಹೆಚ್ಚುವರಿ ವೈದ್ಯರು ಕೋವಿಡ್ ಗಾಗಿಯೇ ಮೀಸಲಾಗಿ ಇರಲಿದ್ದಾರೆ. ಇವರ ಹೆಸರು, ಸಂಪರ್ಕ ಸಂಖ್ಯೆಯನ್ನು ಕಿಟ್ ನಲ್ಲಿಯೇ ನಮೂದಿಸಲಿದೆ ಪಾಲಿಕೆ.
ನಗರದಲ್ಲಿ ಕಳೆದ 40 ದಿನದಿಂದ 400ರ ಸರಾಸರಿಯಂತೆ ಪ್ರಕರಣಗಳು ಕಂಡುಬರುತ್ತಿದೆ. ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಸದ್ಯ ಒಟ್ಟು 189 ಕೋವಿಡ್ ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲಿ, 462 ಖಾಸಗಿಯಲ್ಲಿ, 88 ಮಂದಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ 60,54,264 (67%) ಮಂದಿ ಮೊದಲ ಡೋಸ್ ಪಡೆದಿದ್ರೆ, 17,07,678 (19%) ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಯಲ್ಲಿ, 9,78,671 ( 92%) ಜನರು ಮೊದಲ ಡೋಸ್ ಪಡೆದಿದ್ರೆ 2,13,976 (22%) ಮಂದಿ ಎರಡನೇ ಡೋಸ್ ಪಡೆದಿದ್ದಾರೆ.
ಆಗಸ್ಟ್ 15 ರ ವರೆಗೆ ಕರ್ಫ್ಯೂ ಸೇರಿದಂತೆ ಯಾವುದೇ ಕಠಿಣಕ್ರಮ ಇರುವುದಿಲ್ಲ …
ಎಂದು ಪಾಲಿಕೆ ಸ್ಪಷ್ಟ ಪಡಿಸಿದೆ. ಅದಾದ ಬಳಿಕ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ನಂತರ ಕರ್ಫ್ಯೂ ಆಗಲೂಬಹುದು, ಆಗದೆಯೂ ಇರಬಹುದು ಎಂದಿದೆ ಬಿಬಿಎಂಪಿ. ಶಾಲೆಗಳನ್ನು ಆರಂಭಿಸಲು ತಜ್ಞರು ಅಭಿಪ್ರಾಯ ಕೊಟ್ಟಿದಾರೆ. ಹೀಗಾಗಿ ಹಂತ ಹಂತವಾಗಿ ಆರಂಭವಾಗಲಿದೆ. ಪಾಸಿಟಿವಿಟಿ 2 ಅಥವಾ 3% ಕ್ಕಿಂತ ಹೆಚ್ಚಾದರೆ ಮಾತ್ರ ಕರ್ಫ್ಯೂ ಬಗ್ಗೆ ಚಿಂತನೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಇನ್ನು, ಪದ್ಮನಾಭ ನಗರದಲ್ಲಿ ಮಕ್ಕಳಿಗಾಗಿ ಮಾಡೆಲ್ ಆಸ್ಪತ್ರೆ ಯನ್ನೂ ಪಾಲಿಕೆ ಸಿದ್ಧ ಮಾಡಿಕೊಳ್ಳುತ್ತಿದೆ. ನಂತರ ಪರಿಸ್ಥಿತಿ ನೋಡಿಕೊಂಡು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ
ಮಕ್ಕಳ ಆಸ್ಪತ್ರೆ ತೆರೆಯಲು ಕ್ರಮ ಎಂದು ಇಂದಿನ ಸಭೆಯಲ್ಲಿ ಬಿಬಿಎಂಪಿ ನಿರ್ಧಿರಿಸಿಕೊಂಡಿದೆ. ಒಟ್ಟಾರೆ ಮೂರನೇ ಅಲೆ ಮುಂಚಿತವಾಗಿಯೇ ಬಿಬಿಎಂಪಿ ಕಟ್ಟುನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಇದನ್ನು ಕಾರ್ಯರೂಪಕ್ಕೆ ತರಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಬಿಬಿಎಂಪಿ ಅಂತೆಯೇ ಉಳಿದ ಜಿಲ್ಲೆಗಳ ಮಹಾನಗರಪಾಲಿಕೆಗಳು, ನಗರಪಾಲಿಕೆಗಳು, ಜಿಲ್ಲಾಡಳಿತ ,ತಾಲೂಕಾಡಳಿತ, ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ.
ಒಟ್ಟಿನಲ್ಲಿ ಮೂರನೆಯ ಬಂದಮೇಲೆ ಅನುಭವಿಸುವುದಕ್ಕಿಂತ ಬರುವ ಮುಂಚೆಯೇ ಒಂದಷ್ಟು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಲಾಕ್ಡೌನ್ ಮಾಡುವಂತಹ ಪ್ರಮೇಯ ಉದ್ಭವವಾಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ….
ವರದಿ …ರಘುರಾಜ್ ಹೆಚ್. ಕೆ….
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…