
ಶಿಕಾರಿಪುರ, ಜ.28: ಜಗತ್ತಿನಲ್ಲಿ ಸಾಧನೆ ಮಾಡಿದವರೆಲ್ಲರೂ ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳೇ. ಹೀಗಾಗಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸದೆ ಪ್ರತಿಯೊಬ್ಬ ಪೋಷಕರೂ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ರಮೇಶ್ ಹಿರೇಜಂಬೂರು ಹೇಳಿದರು.
ಶಿಕಾರಿಪುರ ತಾಲೂಕು ಹಿರೇಜಂಬೂರು ಗ್ರಾಮದ ಮಲೆನಾಡು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೊರೋನಾ ದಾಳಿಯ ನಂತರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪ್ರಮಾಣ ಶೇ.18ರಷ್ಟು ಹೆಚ್ಚಾಗಿದೆ. ಇದು ಆಶಾದಾಯಕ ಬೆಳವಣಿಗೆ. ಗ್ರಾಮೀಣ ಪ್ರದೇಶಗಳಲ್ಲೇ ಇಂದು ಇಡೀ ರಾಜ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಶಿಕ್ಷಕರು ಬಂದು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ದಯನೀಯವಾಗಿ ಕೇಳುವ ಪರಿಸ್ಥಿತಿ ಹಳ್ಳಿಗಳಲ್ಲಿ ಬರುವುದು ಬೇಡ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ. ಇದರಿಂದ ಮಕ್ಕಳು ಜ್ಞಾನವಂತರಾಗುವ ಜೊತೆಗೆ ಬದುಕನ್ನೂ ಕಲಿಯುತ್ತಾರೆ ಎಂದು ಹೇಳಿದರು.
ನಗರ ಪ್ರದೇಶಗಳಲ್ಲಿ ಇಂದು ಕಾನ್ವೆಂಟ್ ಅಥವಾ ಖಾಸಗಿ ಶಾಲೆಗಳ ಅಬ್ಬರ ಹೆಚ್ಚಾಗಿ ಸರ್ಕಾರಿ ಶಾಲೆಗಳು ಅವನತಿ ಹಂತ ತಲುಪುತ್ತಿವೆ. ಇವುಗಳಿಂದ ಕೇವಲ ಹೆಗ್ಗಳಿಕೆ, ಪ್ರತಿಷ್ಠೆ ಹೆಚ್ಚಾಗುತ್ತಿದೆಯೇ ಹೊರತು ಮಕ್ಕಳ ಬದುಕಿಗೆ ಉಪಯೋಗವಾಗುತ್ತಿಲ್ಲ. ಆದರೆ ಸರ್ಕಾರಿ ಶಾಲೆಗಳಿಂದ ಪೋಷಕರಿಗೆ ಆರ್ಥಿಕ ಹೊರೆ ತಪ್ಪುತ್ತದೆ. ಹಾಗೆಯೇ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಮಕ್ಕಳು ಬದುಕನ್ನೂ ಕಲಿಯುತ್ತಾರೆ ಎಂದು ರಮೇಶ್ ಹಿರೇಜಂಬೂರು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಮೇಲು ಕೀಳು ಎಂಬುದು ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಾತ್ರಕ್ಕೆ ಕೀಳರಿಮೆ ಬೇಡ. ನಾವೆಲ್ಲ ಓದಿದ್ದು ಸರ್ಕಾರಿ ಶಾಲೆಗಳಲ್ಲಿಯೇ. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ರಂತ ಮೇದಾವಿಗಳು ಓದಿದ್ದೂ ಸರ್ಕಾರಿ ಶಾಲೆಗಳಲ್ಲಿ ಅದನ್ನು ನಾವು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ತನ್ನದೇ ಆದ ಶಕ್ತಿ ಸಾಮರ್ಥ್ಯ ಇದ್ದೇ ಇರುತ್ತದೆ. ಆ ಮಗುವಿನ ಪ್ರತಿಭೆ ಹಾಗೂ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸುವ ಮನೋಸ್ಥಿತಿ ಪೋಷಕರದ್ದಾಗಬೇಕು. ಆಗ ಮಕ್ಕಳೊಳಗಿನ ಪ್ರತಿಭೆಗೆ ಹೊರಬರುತ್ತದೆ. ಅವರು ಸಾಧನೆಯ ಶಿಖರ ಏರುತ್ತಾರೆ ಎಂದು ರಮೇಶ್ ಹಿರೇಜಂಬೂರು ಹೇಳಿದರು.
ಕಾಲೆಳೆಯುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ದಿ. ನಟ ಪುನಿತ್ ರಾಜಕುಮಾರ್ ಹೇಳಿದ ಹಾಗೆ ಕಾಲು ಎಳೆಯುವವರು ಎಂದಿಗೂ ಕಾಲ ಕೆಳಗೆ ಇರ್ತಾರೆ. ಅಂತವರಿಂದ ಅಂತರ ಕಾಯ್ದುಕೊಂಡು ಆನೆ ನಡೆದಿದ್ದೇ ಹಾದಿ ಎನ್ನುವಂತೆ ನಿಮ್ಮ ಓದು, ಸಾಧನೆ ಕಡೆಗೆ ಮಕ್ಕಳು ಗಮನ ಕೊಡಬೇಕು. ಬಡತನಕ್ಕೆ ಹೆದರಿ ಶಿಕ್ಷಣದಿಂದ ದೂರ ಉಳಿಯಬೇಡಿ. ಕಮಲ ಹುಟ್ಟುವುದು ಕೆಸರಿನಲ್ಲಿಯೇ ಹೊರತು ಸ್ವಚ್ಛಂದ ಜಾಗದಲ್ಲಿ ಅಲ್ಲ. ಗುಲಾಬಿ ಅರಳುವುದು ಮುಳ್ಳುಗಳ ಮದ್ಯೆಯೇ. ಅದನ್ನ ಅರಿತು ಕಷ್ಟಗಳಿಗೆ, ಅವಮಾನಗಳಿಗೆ ಹೆದರದೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಓದಿ, ಸಾಧಿಸಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಡಿ ಬಿಲ್ಡರ್ ಸುರೇಶ್ ನಾಯ್ಕ, ಮಾತನಾಡಿ, ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಅವರ ಬೆನ್ನು ತಟ್ಟಿ. ನಿಮ್ಮ ಮಕ್ಕಳು ಖಂಡಿತಾ ಮುಂದೆ ಬರಲು, ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ರಮೇಶ್ ಹಿರೇಜಂಬೂರು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಡಿ ಬಿಲ್ಡರ್ ಸುರೇಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಮಲ್ಲೇಶಪ್ಪ, ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ತೇಜಪ್ಪ, ಧರ್ಮದರ್ಶಿಗಳಾದ ಸಿದ್ದನಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಿದ್ದರಾಮಪ್ಪ, ಮಹಾದೇವಪ್ಪ, ಶಿವಾನಂದಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಮೃತ್ಯುಂಜಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ರಘುರಾಜ್ ಹೆಚ್.ಕೆ..9449553305…