
ಶಿವಮೊಗ್ಗ :- ಚೋರಡಿ ಗ್ರಾಮ ಪಂಚಾಯಿತಿ ಗ್ರಾಪಂ ಪಿಡಿಒ ಅವರನ್ನು ಕಾರಣವೇ ಇಲ್ಲದೇ ಜಿಪಂ ಸಿಇಒ ಅಮಾನತು ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳಕ್ಕೆ ಆಗಮಿಸಿ ಅಮಾನತು ಹಿಂದಕ್ಕೆ ಪಡೆಯುವವರೆಗೆ ಗ್ರಾಪಂ ಕಚೇರಿ ಬೀಗ ತೆರೆಯಲೂ ಬಿಡುವುದಿಲ್ಲ ಎಂದು ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರು ಅಹೋರಾತ್ರಿ ಧರಣಿ ನಡೆಸಿದರು.
ತಾಲೂಕಿನ ಚೋರಡಿ ಗ್ರಾಪಂ ಆವರಣದಲ್ಲಿ ಸದಸ್ಯರು ಅಹೋರಾತ್ರಿ ಅರ್ನಿದಿಷ್ಟಾವಧಿ ಧರಣಿ ನಡೆಸಿದ್ದಾರೆ.
ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಸಂಬಂಧ ಹಿಂದೆಯೇ ಜಾಗ ಗುರುತಿಸಲಾಗಿದೆ. ಆ ಜಾಗವನ್ನು ಸ್ವಚ್ಛ ಮಾಡಲು ಎಲ್ಲಾ ಗ್ರಾಪಂ ಸದಸ್ಯರು ಪಿಡಿಒ ಜೊತೆಗೆ ಸೋಮವಾರ ತೆರಳಿದ್ದೆವು. ಅಲ್ಲಿ ಕೆಲವರು ಒತ್ತುವರಿ ಕೂಡ ಮಾಡಿದ್ದಾರೆ. ಆದರೆ ಒತ್ತುವರಿ ಜಾಗದ ವಿಚಾರಕ್ಕೆ ಹೋಗದೇ ಖಾಲಿ ಇರುವ ಜಾಗವನ್ನು ಮಾತ್ರ ಸ್ವಚ್ಛ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಒತ್ತುವರಿ ಮಾಡಿಕೊಂಡಿರುವ ಚಂದ್ರಕಲಾ ಎಂಬ ಮಹಿಳೆ ವಿಷ ಕುಡಿದಂತೆ ಮಾಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಅದೇ ವೇಳೆ ದಲಿತ ಸಂಘರ್ಷ ಸಮಿತಿಯವರು ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟಕ್ಕೇ ಜಿಪಂ ಸಿಇಒ, ಗ್ರಾಪಂ ಪಿಡಿಒ ಅವರನ್ನು ಅಮಾನತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೇ ವಾರದಲ್ಲಿ ಎರಡು ಬಾರಿ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಪಿಡಿಒ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅಮಾನತು ಮಾಡಿರುವುದು ಸರಿಯಲ್ಲ. ಕೂಡಲೇ ಜಿಪಂ ಸಿಇಒ ಗ್ರಾಮಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಅಲ್ಲಿಯವರೆಗೂ ಧರಣಿ ಹಿಂಪಡೆಯುವುದಿಲ್ಲ. ಗ್ರಾಪಂ ಕಚೇರಿ ಬಾಗಿಲನ್ನೂ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಗ್ರಾಪಂ ಅಧ್ಯಕ್ಷೆ ಸುಧಾ ಆಂಜನೇಯ, ಉಪಾಧ್ಯಕ್ಷೆ ಶಾರದಮ್ಮ ಹೂವಪ್ಪ, ಸದಸ್ಯರಾದ ನಿರಂಜನ ಗೌಡ, ರಾಜೇಶ್, ಅಶೋಕ, ಶಿವಕುಮಾರ್ ಸೇರಿದಂತೆ ಎಲ್ಲಾ ಸದಸ್ಯರು, ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ…
ಓಂಕಾರ ಎಸ್. ವಿ. ತಾಳಗುಪ್ಪ….