
ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಹಳ್ಳಿ ಗ್ರಾಮದ ವಾಸಿಯಾದ ಶಂಕ್ರಮ್ಮ, 70 ವರ್ಷ ರವರು ಅದೇ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಬೇಡಿ ಹಣ ಪಡೆದು, ಜೀವನ ಸಾಗಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ದೇವಸ್ಥಾನದ ಎದುರು ಇರುವ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ನ ಒಳಭಾಗ ಮಲಗುತ್ತಿದ್ದರು. ದಿನಾಂಕ:03/12/2022 ರಂದು ಬೆಳಿಗ್ಗೆ ದೇವಸ್ಥಾನದ ಅರ್ಚಕರು ಕರೆ ಮಾಡಿ ಶಂಕ್ರಮ್ಮರವರು ಮೃತ ಪಟ್ಟಿರುತ್ತಾರೆಂದು ತಿಳಿಸಿದ್ದು, ಹೋಗಿ ನೋಡಿದಾಗ ಯಾರೋ ಅಪರಿಚಿತರು ಶಂಕ್ರಮ್ಮರವರನ್ನು ಕೊಲೆ ಮಾಡಿ ಅವರ ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಮೃತೆಯ ಮೊಮ್ಮಗಳು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 151/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಜಿತೇಂದ್ರಕುಮಾರ ದಯಾಮ, ಐಪಿಎಸ್ ರವರ ಮೇಲ್ವಿಚಾರಣೆಯಲ್ಲಿ ಪೇಪರ್ ಟೌನ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಈ ಓ ರವರ ನೇತೃತ್ವದಲ್ಲಿ, ಪಿಎಸ್ಐ ಕುಮಾರಿ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳಾದ ರತ್ನಾಕರ,ವಾಸುದೇವ,ಚಿನ್ನನಾಯ್ಕ,ಹನಮಂತ ಅವಟಿ,ಆದರ್ಶ ಶೆಟ್ಟಿ,ಮೌನೇಶ ಶೀಖಲ್ ಅರುಣ್ ಆರ್,ವಿಕ್ರಮ್ ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕ:17/12/2022 ರಂದು ಪ್ರಕರಣದ ಆರೋಪಿತನಾದ ಕರುಣಾಕರ ದೇವಾಡಿಗ, 24 ವರ್ಷ, ಗಾರೆ ಕೆಲಸ, ದುಗ್ಗದ ಮನೆ, ಕಂಬದಕೋಣೆ, ಕುಂದಾಪುರ, ಬೈಂದೂರು ತಾಲೂಕ್, ಉಡುಪಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಮೃತೆ ಶಂಕ್ರಮ್ಮರವರ ಮೈಮೇಲಿದ್ದ ಅಂದಾಜು ಮೌಲ್ಯ 14,000/- ರೂಗಳ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತನು ದಿನಾಂಕ:- 02-12-2022 ರಂದು ರಾತ್ರಿ ಶಂಕ್ರಮ್ಮ ರವರ ಕಿವಿಯಲ್ಲಿದ್ದ ಬಂಗಾರದ ಓಲೆ ಮತ್ತು ಮೂಗಿನಲ್ಲಿದ್ದ ಮೂಗು ಬಟ್ಟನ್ನು ಕಿತ್ತುಕೊಳ್ಳುವ ಸಂಬಂಧ ಆಕೆಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಓಲೆ ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಹೋಗಿರುವುದು ವಿಚಾರಣೆಯಲ್ಲಿ ಕಂಡು ಬಂದಿರುತ್ತದೆ.
ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿ ಪ್ರಶಂಸಿಸಿರುತ್ತಾರೆ....