
ಅಕ್ಕ ತಂಗಿ ತಾಯಿ ಅಣ್ಣ ತಮ್ಮಂದಿರಂತೆ ನಮ್ಮ ಸಹೋದ್ಯೋಗಿಗಳೆಲ್ಲರಲ್ಲೂ ನನಗೆ ವಿವಿಧ ಅಕ್ಕರೆಯ ಬಂಧವಿದೆ. ಇಲ್ಲಿನ ನಾಲ್ಕು ವರ್ಷಗಳು ಕ್ಷಣಗಳಂತೆ ಉರುಳಿ ಹೋಗಿವೆ. ಖುಷಿ ಇದ್ದಾಗ ದಿನ ಕಳೆಯುವುದೇ ತಿಳಿಯುವುದಿಲ್ಲ.ನಾನು ಹಿಂದೆ ಕೆಲವಾರು ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ.ಆದರೆ ಇಲ್ಲಿರುವ ಸೌಹಾರ್ಧತೆ ಅನ್ಯೋನ್ಯತೆ ಎಲ್ಲೂ ಕಂಡಿಲ್ಲ.ನಮ್ಮ ಸಂಸ್ಥೆ ಚೆಂದದ ಒಂದು ಕುಟುಂಬದಂತಿತ್ತು. ನನ್ನ ಯಶಸ್ಸಿನ ಹಿಂದೆ ನನ್ನ ತಂದೆ ತಾಯಿ ಪತಿ ಮತ್ತು ಕುಟುಂಬದ ದೊಡ್ಡ ಸಹಕಾರ ಬೆಂಬಲವಿದೆ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಉನ್ನತ ವ್ಯಾಸಾಂಗಕ್ಕೆ ತೆರಳುತ್ತಿರುವ ವೈದ್ಯಾಧಿಕಾರಿ ಡಾ.ಶಮಾ ಅಂಜುಮ್ ನುಡಿದರು.
ಅವರು ಪ್ರಾ.ಆ.ಕೇಂದ್ರ ಮಾಳೂರಿನಲ್ಲಿ ಸಹೋದ್ಯೋಗಿಗಳು ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ,ದುಡ್ಡು ಆಸ್ತಿಗಳನ್ನು ಯಾರಾದರೂ ಗಳಿಸಬಹುದು.ಆದರೆ ಜನರ ಪ್ರೀತಿ ವಿಶ್ವಾಸದ ಗಳಿಕೆ ಎಲ್ಲರಿಂದಲೂ ಸಾಧ್ಯವಿಲ್ಲ.ಅದಕ್ಕೆ ವ್ಯಕ್ತಿತ್ವ ಮುಖ್ಯ. ಆಸ್ಪತ್ರೆಗೆ ಬರುವವರೆಲ್ಲರೂ ಒಂದಲ್ಲ ಒಂದು ನೋವಿನಿಂದ ಬಳಲುವವರೇ ಆಗಿರುತ್ತಾರೆ.ವೈದ್ಯರು,ಸಿಬ್ಬಂದಿಗಳ ಕಾಳಜಿಯ ಸ್ಪಂದನೆಗಳು ಅವರಿಗೆ ಬಹು ದೊಡ್ಡ ಸಮಾಧಾನ ನೀಡಬಲ್ಲವು. ಅದು ವೈದ್ಯರು ಸಿಬ್ಬಂದಿಗಳ ಮೇಲೆ ಗೌರವ ಅಭಿಮಾನಗಳನ್ನು ಮೂಡಿಸಬಲ್ಲವು.ಉದ್ದೇಶ ಒಳ್ಳೆಯದಿದ್ದರೆ ದೈವ ಸಹಾಯ ಇದ್ದೇ ಇರುತ್ತದೆ ಎಂಬುದು ನನ್ನ ಅನುಭವ ಮತ್ತು ನಂಬಿಕೆ.ಡಾ.ಶಮಾ ಅಂಜುಮ್ ರಿಗೆ ಒಳ್ಳೆಯ ಉದ್ದೇಶವಿಗೆ, ರೋಗಿಗಳ ಸಂಕಷ್ಟಗಳಿಗೆ ಸ್ಪಂದಿಸುವ ಕಾಳಜಿ ಇದೆ. ಅಹಮ್ಮಿಕೆ ದೂರ ಅಟ್ಟಿ ಎಲ್ಲರೊಂದಿಗೆ ಬೆರೆಯುವ ಗುಣ ಇದೆ.ಇದರಿಂದಾಗಿ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಆರೋಗ್ಯ ಸೇವೆ ದೊರಕುವ ಭರವಸೆ ಇದೆ.ಅವರ ಭವಿಷ್ಯಕ್ಕೆ ಹಾರ್ದಿಕವಾಗಿ ಶುಭ ಹಾರೈಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಟರಾಜ್ ಮಾತನಾಡಿ, ತಮ್ಮ ಸೌಹಾರ್ಧಯುತ ನಡವಳಿಕೆಗಳಿಂದ ಎಲ್ಲರ ವಿಶ್ವಾಸ ಗಳಿಸಿ ಡಾ.ಶಮಾ ಅಂಜುಮ್ ರವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಉನ್ನತ ವ್ಯಾಸಾಂಗದಿಂದ ಜನರಿಗೆ ಇನ್ನಷ್ಟು ಹೆಚ್ಚಿನ ಅನುಕೂಲವಾಗಲಿದೆ. ಮುಂದೆ ಇವರ ಸೇವೆ ನಮ್ಮ ಜಿಲ್ಲೆಗೇ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಿ ಸಿ ಶಿವಶಂಕರ್, ನಿವೃತ್ತ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋಧ, ಆಶಾ ಫೆಸಿಲಿಟೇಟರ್ ರೂಪ,ಡಿ ದರ್ಜೆ ನೌಕರರಾದ ನಾಗಶ್ರೀ ಮತ್ತಿತರರು ವೈದ್ಯಾಧಿಕಾರಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಪ್ರಾ.ಆ.ಕೇಂದ್ರ ಮಂಡಗದ್ದೆಯ ವೈದ್ಯಾಧಿಕಾರಿ ಡಾ.ಸುರೇಶ್, ಬೆಟ್ಟ ಬಸವಾನಿ ವೈದ್ಯಾಧಿಕಾರಿ ಡಾ.ತೌಸೀಫ್, ಬಿ ಪಿ ಎಂ ಗಿರಿ ಡಿ ಟಿ ವೇದಿಕೆಯಲ್ಲಿದ್ದರು.
ಶುಶ್ರೂಷಣಾಧಿಕಾರಿ ಜಯಲಕ್ಷ್ಮಿ,ದ್ವಿತೀಯ ದರ್ಜೆ ಸಹಾಯಕರಾದ ತಿಲಕಮ್ಮ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಅಶೋಕ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಬಸವರಾಜ್, ಆಯಿಷಾ,ಪ್ರಾ.ಆ.ಕೇಂದ್ರದ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಮತ್ತಿತರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಅನಿತ ಸ್ವಾಗತಿಸಿ ,ಸುನೀತ ನಿರೂಪಿಸಿದರು.ಡಿ ದರ್ಜೆ ನೌಕರ ಶೇಖರಪ್ಪ ವಂದಿಸಿದರು.
ರಘುರಾಜ್ ಹೆಚ್.ಕೆ…9449553305...