
ಶಿವಮೊಗ್ಗ: ಕಠಿಣ ಪರಿಶ್ರಮದಲ್ಲಿ ಕಾರ್ಯನಿರ್ವಹಿಸುವ ಪತ್ರಿಕಾವಿತರಕರಿಗೆ ಸರ್ಕಾರದಿಂದ ಸೇವಾಸೌಲಭ್ಯ ದೊರಕಿಸಲು ತಾವು ಪ್ರಯತ್ನಿಸುವುದಾಗಿ ವಿಧಾನಪರಿಷತ್ ಶಾಸಕ ಡಿ.ಎಸ್.ಅರುಣ್ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ಪತ್ರಿಕಾವಿತರಕರ ಸಂಘದ ಶಿವಮೊಗ್ಗ ಶಾಖೆ ಮೀಡಿಯಾ ಹೌಸ್ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ತಾವು ಅನೇಕ ಸಂದರ್ಭಗಳಲ್ಲಿ ಪತ್ರಿಕಾ ವಿತರಕರ ಪ್ರಾಮಾಣಿಕ ಸೇವೆಯನ್ನು ಹತ್ತಿರದಿಂದ ಗಮನಿಸಿದ್ದಾಗಿ ಮತ್ತು ಈ ಸೇವಾ ವೃತ್ತಿಯು ಬಹುವಿಧದ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ವಿವರಿಸಿದರು.
ಪತ್ರಿಕಾವಿತರಕರ ಕಷ್ಟನಷ್ಟಗಳು , ಸಂಘಟನೆಯ ಅನಿವಾರ್ಯತೆ ಮತ್ತು ಸರ್ಕಾರದಿಂದ ಅಸಂಘಟಿತ ಕಾರ್ಮಿಕರ ಸೌಲಭ್ಯ ದೊರಕಿಸುವ ಕುರಿತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್. ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘದ ಮಾಜಿ ಉಪಾಧ್ಯಕ್ಷ ನ.ರಾ.ವೆಂಕಟೇಶ್. ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ, ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಜಿ.ಪದ್ಮನಾಭ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡಿದರು.
ಕರ್ನಾಟಕ ರಾಜ್ಯ ಪತ್ರಿಕಾವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ಪತ್ರಿಕಾವಿತರಕರ ಯೋಗಕ್ಷೇಮದ ಕುರಿತು ಸಂಘವು ಕೈಗೊಂಡಿರುವ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಸಾಗರಟೌನ್ನ ರಸ್ತೆಅಪಘಾತದಲ್ಲಿ ಮಡಿದ ವಿತರಕ ಗುರುಸ್ವಾಮಿ ಕುಟುಂಬಕ್ಕೆ ಸಂಘಟನೆವತಿಯಿಂದ ೨೫ಸಾವಿರ ರೂಪಾಯಿಗಳ ನಗದು ಸಹಾಯವನ್ನು ಪೋಷಕರಿಗೆ ವಿತರಿಸಲಾಯಿತು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಶಾಖೆ ಅಧ್ಯಕ್ಷ ಎನ್.ಮಾಲತೇಶ್, ಕಾರ್ಯದರ್ಶಿ ಮುಕ್ತಾರ್ ಅಹಮದ್, ಹಾಗೂ ಪದಾಧಿಕಾರಿಗಳಾದ ಪರಮೇಶ್ವರಪ್ಪ, ನಾಗಭೂಷಣ್ ತೀರ್ಥಹಳ್ಳಿ, ವಿನಯ್ಕುಮಾರ್ ತೊಗರ್ಸಿ, ಮುಂಜುನಾಥ ಎಸ್.ಪಿ. ಪರಶುರಾಮ್ ಭದ್ರಾವತಿ, ಹರ್ಷ ಎನ್.ಆರ್, ಮತ್ತು ವಿವಿಧ ಜಿಲ್ಲೆಗಳ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಹಾಜರಿದ್ದರು.