
ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ ನಿವೃತ್ತಿ ಎಂಬುದು ಸಾಮಾನ್ಯ. ಇಂದು ನಾವಿಲ್ಲಿ ಎಲ್ಲವೂ ಆಗಿರಬಹುದು ಆದರೆ ನಾಳೆ ಹಾಗಿರಲಿಕ್ಕಿಲ್ಲ ಎಂಬುದ ಮನಗಂಡು ಕೇವಲ ಹುದ್ದೆ ಸಂಸ್ಥೆಗಳಿಗಷ್ಟೇ ಸೀಮಿತರಾಗದಂತೆ ಒಂದಿಷ್ಟು ವಿಶಾಲ ದೃಷ್ಟಿಕೋನದಿಂದ ಸೌಹಾರ್ದತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಮ್ಮ ಅನುಪಸ್ಥಿತಿಯ ನಂತರವೂ ನಾವು ಒಂದಿಷ್ಟು ಕಾಲವಾದರೂ ಒಂದಿಷ್ಟು ಜನರ ಮನಸ್ಸಿನಲ್ಲಿ ಉಳಿಯುತ್ತೇವೆ. ಇಲ್ಲದಿದ್ದರೆ ಸದ್ದಿಲ್ಲದೆ ಮರೆಯಾಗುತ್ತೇವೆ. ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ.ತಾರತಮ್ಯವಿಲ್ಲದೆ ಇಲಾಖೆಯ ಎಲ್ಲಾ ವೃಂದಗಳ ಪ್ರತಿಯೊಬ್ಬ ಉತ್ತಮ ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಿದ ತೃಪ್ತಿ ಇದೆ. ಕೃತಜ್ಞತೆ ಎಂಬುದು ಹೃದಯದ ಜ್ಞಾಪಕ ಶಕ್ತಿ ಎನ್ನುವ ಮಾತಿದೆ. ನಮ್ಮ ಸಂಘಟನಾತ್ಮಕ ಚಟುವಟಿಕೆಗಳಿಗೆ ಸಹಕಾರ ನೀಡಿದ ಸಹೃದಯಿಗಳನ್ನು ನಾವು ಸದಾ ಸ್ಮರಿಸುತ್ತೇವೆ ಈ ದಿಸೆಯಲ್ಲಿ ಡಾ.ಗಿರೀಶ್ ರವರು ನೀಡಿರುವ ಸಹಕಾರ ಬೆಂಬಲಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.ಅವರು ಜೆ ಸಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಮಂಗಳೂರಿಗೆ ವರ್ಗಾವಣೆಗೊಂಡ ಫಿಜೀಶಿಯನ್ ತಜ್ಞ ವೈದ್ಯಾಧಿಕಾರಿ ಡಾ.ಗಿರೀಶ್ ರವರನ್ನು ತಾಲ್ಲೂಕು ಆರೋಗ್ಯ ಇಲಾಖಾ ಸಂಘದ ವತಿಯಿಂದ ಜೆ ಸಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗಿರೀಶ್, ನಮ್ಮ ಕರ್ತವ್ಯವನ್ನು ಸೇವೆ ಎಂದೇ ಪರಿಗಣಿಸಲಾಗುತ್ತದೆ. ಸೇವೆಗೆ ಬಹಳ ದೊಡ್ಡ ಸ್ಥಾನವಿದೆ. ಅದನ್ನು ಅರಿತು ನಮ್ಮ ವ್ಯಾಪ್ತಿಯಲ್ಲಿ ಒಂದಿಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಪ್ರಯತ್ನಿಸಬೇಕು. ಅಪ್ರಿಯವಾದ ಸತ್ಯ ಮತ್ತು ಪ್ರಿಯವಾದ ಸುಳ್ಳು ಎರಡೂ ಅಪಾಯಕಾರಿ.ಎಲ್ಲಿ ಹೇಗೆ ಎಷ್ಟು ಮಾತನಾಡಬೇಕೆಂಬುದು ನಾವು ಅರಿಯಬೇಕು. ಪರನಿಂದನೆ ನಕಾರಾತ್ಮಕ ಮಾತುಗಳು ನಮ್ಮಿಂದ ಹೊರಬಾರದಂತೆ ಸಾಧ್ಯವಾದಷ್ಟು ಎಚ್ಚರಿಕೆಯಿಂದಿರಬೇಕು. ಭಿನ್ನಾಭಿಪ್ರಾಯಗಳು ಸಹಜ. ಅದನ್ನು ದ್ವೇಷವಾಗಿ ಬೆಳೆಯಲು ಬಿಡಬಾರದು ಎಂದು ಸಲಹೆ ನೀಡಿದ ಅವರು. ನನ್ನ ಇಲ್ಲಿನ ಕರ್ತವ್ಯದ ಅವಧಿಯಲ್ಲಿ ಎಲ್ಲರೂ ಉತ್ತಮವಾಗಿ ಸಹಕಾರ ನೀಡಿದ್ದಾರೆ.ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಕೆ ರಾಮಕೃಷ್ಣ. ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯದರ್ಶಿ ಸುಭಾಷ್,ಖಜಾಂಚಿ ಎ ಎಂ ಜಗದೀಶ್ ವೇದಿಕೆಯಲ್ಲಿದ್ದರು.
ವೈದ್ಯಾಧಿಕಾರಿಗಳಾದ ಮಕ್ಕಳ ತಜ್ಞ ಡಾ.ಪ್ರಭಾಕರ್,ಇ ಎನ್ ಟಿ ತಜ್ಞ ಡಾ.ರವಿಕುಮಾರ್,ಕೀಲು ಮೂಳೆ ತಜ್ಞ ಡಾ.ನಿಶ್ಚಲ್, ದಂತ ತಜ್ಞ ಡಾ.ಗುರುರಾಜ್, ನೇತ್ರ ತಜ್ಞೆ ಡಾ. ಮಹಿಮ , ಮೇಟ್ರನ್ ಪಾರ್ವತಿ ಭಟ್, ಕಚೇರಿ ಅಧೀಕ್ಷಕ ಮೃತ್ಯುಂಜಯ್, ಸಂಘದ ಪದಾಧಿಕಾರಿಗಳಾದ ಈಶ್ವರ್,ವಿಶ್ವನಾಥ್, ಕೃಷ್ಣಮೂರ್ತಿ, ತಿಲಕಮ್ಮ, ಅನುಸೂಯ, ದೇವಪ್ರಸಾದ್, ರಾಜಪ್ಪ,ಶೈಲಾ, ಪ್ರಮೀಳ, ಗೀತಾ, ತನುಜಾ, ಶ್ರೀಲತಾ,ರಾಧಾ, ಶಾಹಿನಾ, ಕುಸುಮ, ಗಿರಿ, ತಿಪ್ಪೇಶ್, ರಮೇಶ್, ಪ್ರವೀಣ್ ಸೇರಿದಂತೆ ವಿವಿಧ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಇದ್ದ ಕಾರ್ಯಕ್ರಮದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ ನಿರೂಪಿಸಿದರು. ಹನುಮಂತರೆಡ್ಡಿ ವಂದಿಸಿದರು.