
ನನಗೆ ಬಡತನದ ಕಷ್ಟಗಳ ಸಂಪೂರ್ಣ ಅರಿವಿದೆ.ನಾನು ಚಿಕ್ಕಂದಿನಿಂದ ವೈದ್ಯಕೀಯ ವ್ಯಾಸಾಂಗದವರೆಗೂ ಓದಿದ್ದು ಸರ್ಕಾರಿ ಶಾಲೆ ಕಾಲೇಜುಗಳಲ್ಲಿ. ಕೆಲವೊಮ್ಮೆ ಹೊಸದಾಗಿ ಪುಸ್ತಕ ತೆಗೆದುಕೊಳ್ಳುವುದೂ ಕಷ್ಟವಿತ್ತು ಆಗ ಹಿರಿಯ ವಿದ್ಯಾರ್ಥಿಗಳ ಪುಸ್ತಕಗಳನ್ನು ಪಡೆದು ಓದಿದ್ದೇನೆ.ವೈದ್ಯಕೀಯ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದಿದ್ದೇನೆ.ನನ್ನ ಯಶಸ್ಸಿನ ಹಿಂದೆ ದೇವರು ಮತ್ತು ನನ್ನ ತಂದೆ ತಾಯಿಯ ಕೊಡುಗೆ ಬಹಳ ದೊಡ್ಡದಿದೆ. ನನ್ನ ಸಾಧನೆ ಬಗ್ಗೆ ನನ್ನ ತಂದೆ ತಾಯಿಗೆ ತುಂಬು ಹೆಮ್ಮೆ ಇದೆ.ನನ್ನ ಬಗ್ಗೆ ಜನರು ಒಳ್ಳೆಯ ವೈದ್ಯೆ ಎಂದು ಹೇಳುವುದನ್ನು ಸ್ವತಃ ಕೇಳಿಸಿಕೊಂಡ ನನ್ನ ತಂದೆ ಆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಸಂತಸ ಪಡುವುದು ಕಂಡಾಗ ಬದುಕು ಸಾರ್ಥಕವೆನಿಸಿದ ತೃಪ್ತ ಭಾವ. ನಿಮ್ಮ ಚಪ್ಪಾಳೆ ಪ್ರಶಂಸೆ ಜನರ ಮೆಚ್ಚುಗೆಗಳು ನಿಜವಾಗಿ ಸಲ್ಲಬೇಕಿರುವುದು ನನ್ನ ತಂದೆ ತಾಯಿಗಳಿಗೆ.ಅವರು ನೀಡಿದ ಬೆಂಬಲದಿಂದ ನನಗಿಷ್ಟು ಸಾಧಿಸಲು ಸಾಧ್ಯವಾಗಿದೆ.ಈ ಸಂದರ್ಭದಲ್ಲಿ ನಾನವರಿಗೆ ಧನ್ಯವಾದ ಸಲ್ಲಿಸಲು ಇಚ್ಚಿಸುತ್ತೇನೆ ಎಂದು ಸಮುದಾಯ ಆರೊಗ್ಯ ಕೇಂದ್ರ ಕನ್ನಂಗಿಯ ವೈದ್ಯಾಧಿಕಾರಿ ಡಾ.ರುಬಿಯಾ ನುಡಿದರು.ಉನ್ನತ ವ್ಯಾಸಾಂಗಕ್ಕೆ ತೆರಳುತ್ತಿರುವ ಅವರನ್ನು ಅಭಿನಂದಿಸಲು ಸ.ಆ.ಕೇಂದ್ರದ ಸಿಬ್ಬಂದಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮುಂದುವರೆದು ನನ್ನ ಯಶಸ್ಸಿನ ಹಿಂದೆ ನನ್ನೆಲ್ಲಾ ಸಹೋದ್ಯೋಗಿಗಳ ಪಾಲೂ ಇದೆ. ನಾನು ವೃತ್ತಿಯಲ್ಲಿ ಎಷ್ಟೇ ಎತ್ತರಕ್ಕೇರಿದರೂ ನಾನು ಇದಾವುದನ್ನೂ ಮರೆಯುವುದಿಲ್ಲ. ಇನ್ನಷ್ಟು ಉತ್ತಮ ರೀತಿಯಿಂದ ಸೇವೆ ಸಲ್ಲಿಸುವ ಮೂಲಕ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪ್ರಾ.ಆ.ಕೇಂದ್ರ ಕೋಣಂದೂರಿನ ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಉನ್ನತ ವ್ಯಾಸಾಂಗಕ್ಕೆ ಮಕ್ಕಳ ತಜ್ಞತೆಯ ಸೀಟು ಸಿಕ್ಕಿರುವುದು ನಿಜಕ್ಕೂ ದೊಡ್ಡ ಸಾಧನೆ. ಖಾಸಗಿ ಸಂಸ್ಥೆಗಳಲ್ಲಿ ಈ ಸೀಟಿಗಾಗಿ ಸುಮಾರು ಎರಡು ಕೋಟಿಯಷ್ಟು ಹಣ ಖರ್ಚಾಗುತ್ತದೆ. ವೈದ್ಯಕೀಯ ಸೇವೆಯ ಜೊತೆಯಲ್ಲಿ ಕನ್ನಂಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿಯೂ ಒಳ್ಳೆಯ ಹೆಸರು ಸಂಪಾದಿಸಿರುವುದು ಇವರ ಕರ್ತವ್ಯ ನಿಷ್ಟೆಗೆ ಸಾಕ್ಷಿ.ಉನ್ನತ ವ್ಯಾಸಾಂಗದಿಂದ ಇವರ ಇನ್ನಷ್ಟು ಹೆಚ್ಚಿನ ಸೇವೆ ಸಮಾಜಕ್ಕೆ ದಕ್ಕಲಿ ಎಂದು ಶುಭ ಹಾರೈಸಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘ ಮತ್ತು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ,ವೈದ್ಯಕೀಯ ವ್ಯಾಸಾಂಗ ಮಾಡುವವರು ಯಾವುದೇ ಕ್ಷೇತ್ರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಯಶಸ್ವಿಯಾಗಿಯೇ ಪಾಸ್ ಆಗುವಷ್ಟು ಸಮರ್ಥರೇ ಆಗಿರುತ್ತಾರೆ.ಹಾಗಾಗಿ ಕೇವಲ ಹಣ ಗಳಿಕೆಯ ಇರಾದೆಯಿಂದ ವೈದ್ಯಕೀಯ ವೃತ್ತಿಗೆ ಬರುವವರು ಅದಕ್ಕಾಗಿ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಸೂಕ್ತ.ಅದು ಅವರು ಸಮಾಜಕ್ಕೆ ಮಾಡುವ ಉಪಕಾರ.ಇಲ್ಲಿ ಹಣಕ್ಕಿಂತ ಸೇವೆಗೆ ಮಹತ್ವ ನೀಡುವವರ ಅಗತ್ಯವಿದೆ. ವೈದ್ಯಕೀಯ ಕ್ಷೇತ್ರ ಉದ್ದಿಮೆಯಾಗುತ್ತಿದೆ ಎಂಬ ಆತಂಕದ ನಡುವೆಯೂ ಸುದೈವವಶಾತ್ ಡಾ.ರುಬಿಯಾ, ಡಾ.ಮಂಜುನಾಥ್ ರವರಂತಹ ಹಲವು ಸೇವಾ ಮನೋಭಾವದ ವೈದ್ಯರು ವೈದ್ಯೋ ನಾರಾಯಣ ಹರಿ ಎಂಬ ನಂಬುಗೆ ಹುಸಿಯಾಗದಂತೆ ಭರವಸೆಯಾಗಿ ನಿಂತಿದ್ದಾರೆ. ಡಾ.ರುಬಿಯಾರವರ ಸೇವೆ ಮುಂದೆಯೂ ನಮ್ಮ ತಾಲ್ಲೂಕಿಗೇ ದಕ್ಕಲಿ. ಎಲ್ಲರ ಆಧರ ಅಭಿಮಾನಗಳಿಗೆ ಪಾತ್ರರಾಗಿ ಅವರು ನಮ್ಮೂರ ಹೆಮ್ಮೆ ಎನಿಸಲಿ ಎಂದು ಶುಭ ಹಾರೈಸಿದರು.
ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಡಿ ಟಿ ಗಿರಿ ವೇದಿಕೆಯಲ್ಲಿದ್ದರು.
ಶುಶ್ರೂಷಣಾಧಿಕಾರಿ ರಾಧ,ಸಹೋದ್ಯೋಗಿಗಳಾದ ಮಂಜುನಾಥ್, ಉಜ್ಜನಿ ಗೌಡ,,ವತ್ಸಲಕೃಷ್ಣ, ಸತ್ಯಮ್ಮ, ಸರಸ್ವತಿ, ಅಭಿಲಾಶ್ ಮತ್ತಿತರರು ಡಾ. ರುಬಿಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಉನ್ನತ ವ್ಯಾಸಂಗದ ಯಶಸ್ಸಿಗೆ ಹಾರ್ದಿಕವಾಗಿ ಶುಭಹಾರೈಸಿದರು.
ಸ.ಆ.ಕೇಂದ್ರದ ಇತರೆ ಪ್ರಾ.ಆ ಕೇಂದ್ರಗಳ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಶುಶ್ರೂಷಣಾಧಿಕಾರಿಗಳಾದ ಸವಿತ ಪ್ರಾರ್ಥಿಸಿ,ಗಣೇಶ್ ಸ್ವಾಗತಿಸಿ ,ಪೂರ್ಣಿಮ ನಿರೂಪಿಸಿ, ಅಧಿತಿ ವಂದಿಸಿದರು.
ರಘುರಾಜ್ ಹೆಚ್.ಕೆ…9449553305…