
ಮಾಜಿ ಮುಖ್ಯಮಂತ್ರಿ ಹಾಗೂ ಜನಾನುರಾಗಿ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಗೆ ರಾಜ್ಯದ್ಯಂತ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಫೆ.೨೧ ರಿಂದ ಸಂಚರಿಸಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯನೂರು ಶಿವನಾಯ್ಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷ ಹೆಚ್.ಇಬ್ರಾಹಿಂ ಸಾಹೇಬರು ಹಾಗೂ ಕುಮಾರ ಸ್ವಾಮಿ, ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ್, ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಫೆ.೨೧ ರಿಂದ ಪಂಚರತ್ನ ಯಾತ್ರೆ ಸಂಚರಿಸಲಿದೆ. ಬಿಜೆಪಿ ಸರಕಾರದ ಬಡವರ ವಿರೋಧಿ ಆಡಳಿತ ನೋಡಿರುವ ಶಿವಮೊಗ್ಗ ಮತ್ತು ಮಲೆನಾಡಿನ ಜನರು ಈ ಬಾರಿ ಜೆಡಿಎಸ್ ಬೆಂಬಲಿಸಲಿದ್ದಾರೆ. ಮೂವರು ಶಾಸಕರನ್ನು ಹೊಂದಿದ್ದ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಯಶಸ್ಸು ಸಿಗಲಿದೆ ಎಂದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ,ಭದ್ರಾವತಿ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಕ್ಷ ಭದ್ರ ಬುನಾದಿ ಹೊಂದಿದೆ. ಪಂಚರತ್ನ ಯಾತ್ರೆಯಿಂದ ಈ ಕ್ಷೇತ್ರಗಳಲ್ಲಿ ಮತ್ತಷ್ಟು ಶಕ್ತಿ ಬರಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್ಹುಕುಂ ಸಾಗುವಳಿದಾರರ ಸಮಸ್ಯೆ, ಅಡಕೆ ಎಲೆ ಚುಕ್ಕಿ ರೋಗ, ಶರಾವತಿ ಸಂತ್ರಸ್ತರ ಸಮಸ್ಯೆ ಮತ್ತು ಜೀವನಾಡಿಗಳಾದ ಎಂ.ಪಿಎಂ.ಮತ್ತು ವಿಐಎಸ್ಎಲ್ ಕಾರ್ಖಾನೆಗಳ ದುಸ್ಥಿತಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಇವುಗಳಿಗೆ ಸರಿಯಾದ ಪರಿಹಾರ ಕೊಡಬಲ್ಲ ಜನನಾಯಕ ಕುಮಾರಣ್ಣ ಅವರು ಮಾತ್ರ ಎಂದು ಶಿವಾನಾಯ್ಕ್ ತಿಳಿಸಿದ್ದಾರೆ.
ಡಬಲ್ ಎಂಜಿನ್ ಸರಕಾರಗಳಿಂದ ಜಿಲ್ಲೆಯ ಸಮಸ್ಯೆಗಳು ಜಟಿಲವಾಗಿವೆ. ಕಾಂಗ್ರೆಸ್ ನಾಯಕರು ಬರೀ ಯಾತ್ರೆ ಮಾಡಿ ಭರವಸೆ ನೀಡುತ್ತಿದ್ದಾರೆ. ಹೆಚ್ಚು ಕಾಲ ದೇಶ ಹಾಗೂ ರಾಜ್ಯದಲ್ಲಿ ಆಳ್ವಿಕೆ ಮಾಡಿದ ಆ ಪಕ್ಷದ ನಾಯಕರು ಸಮಸ್ಯೆಗಳು ಇನ್ನೂ ಯಾಕೆ ಉಳಿದಿವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಜಿಲ್ಲೆಯ ಸಮಸ್ಯೆಗಳಿಗೆ ಉತ್ತರ ನೀಡಲು ದೇವೇಗೌಡರು, ಕುಮಾರಸ್ವಾಮಿ ಅವರಿಂದ ಮಾತ್ರ ಸಾಧ್ಯ. ಆದ್ದರಿಂದ ಪಂಚರತ್ನ ಯಾತ್ರೆಗೆ ಜಿಲ್ಲೆಯ ಪಕ್ಷದ ಕಾರ್ಯಕರ್ತರು, ದೇವೇಗೌಡರು, ಕುಮಾರಣ್ಣ ಹಾಗೂ ಎಂ.ಶ್ರೀಕಾಂತ್ ಅವರ ಅಭಿಮಾನಿಗಳು ಹೆಚ್ಚಿನ ಸಂಖೆಯಲ್ಲಿ ಆಗಮಿಸಬೇಕೆಂದು ಶಿವಾನಾಯ್ಕ್ ಮನವಿ ಮಾಡಿದ್ದಾರೆ..

ರಘುರಾಜ್ ಹೆಚ್.ಕೆ…9449553305…